ಕಾಲಮಿತಿಯಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ: ಡಿಸಿ ರಾಜೇಂದ್ರ
ಮಂಗಳೂರು ಸ್ಮಾರ್ಟ್ ಸಿಟಿ 9ನೇ ಅಂತರ್ ಇಲಾಖಾ ಟಾಸ್ಕ್ ಫೋರ್ಸ್ ಸಮಿತಿ ಸಭೆ

ಮಂಗಳೂರು, ಆ.21: ರಸ್ತೆ, ಫುಟ್ಪಾತ್ ಸೇರಿದಂತೆ ಮಂಗಳೂರು ನಗರದಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯಗಳಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ವಿಳಂಬವಿಲ್ಲದೆ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಂಗಳೂರು ಸ್ಮಾರ್ಟ್ಸಿಟಿ 9ನೇ ಅಂತರ್ ಇಲಾಖಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸ್ತೆ ಅಗಲೀಕರಣ, ಫುಟ್ಪಾತ್, ಒಳಚರಂಡಿ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾದ ನಗರದ ಕೆಲವು ಪ್ರಮುಖ ಅಭಿವೃದ್ಧಿ ಕಾಮಗಾರಿ ಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ಪುರಭವನದ ಮುಂಭಾಗದಲ್ಲಿ ಪಾದಚಾರಿ ಸುರಂಗ ಸೇತುವೆ ಕಾಮಗಾರಿ ನಗರದ ಹೃದಯಭಾಗದಲ್ಲಿ ನಡೆಯುತ್ತಿದ್ದರೂ, ಬೆರಳಣಿಕೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕಾಮಗಾರಿಯನ್ನು ತೀವ್ರಗೊಳಿಸಲು ಸೂಚಿಸಿದರು.
ಮಂಗಳೂರು ನಗರದ ಕೆಲವು ರಸ್ತೆ ಅಗಲೀಕರಣ ಕಾಮಗಾರಿಗಳು ಖಾಸಗಿ ಜಮೀನು ಸಮಸ್ಯೆಯಿಂದ ನನೆಗುದಿಗೆ ಬಿದ್ದಿವೆ. ಟಿಡಿಆರ್ ಅಡಿ ಜಮೀನು ನೀಡಲು ಜಮೀನು ಮಾಲಕರನ್ನು ಮಹಾನಗರಪಾಲಿಕೆ ಅಧಿಕಾರಿಗಳು ನಿರಂತರವಾಗಿ ಮನವೊಲಿಸಬೇಕು. ಮಹಾನಗರಪಾಲಿಕೆ ಆಯುಕ್ತರು ಈ ಬಗ್ಗೆ ಖುದ್ದು ಗಮನಹರಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಸ್ಮಾರ್ಟ್ ರಸ್ತೆ ಯೋಜನೆಯಲ್ಲಿ ರಸ್ತೆ ಅಗಲೀಕರಣ, ಫುಟ್ಪಾತ್, ಚರಂಡಿ, ಕೇಬಲ್ ಡೆಕ್, ದಾರಿದೀಪ ಸೇರಿದಂತೆ ಸಮಗ್ರ ಕಾಮಗಾರಿಯನ್ನು ಸೇರಿಸಿ ಯೋಜನೆ ರೂಪಿಸಬೇಕು ಎಂದು ಡಾ. ರಾಜೇಂದ್ರ ತಿಳಿಸಿದರು.
ಹಂಪನಕಟ್ಟೆ ಹಳೇ ಸರ್ವೀಸ್ ಬಸ್ ನಿಲ್ದಾಣ ಜಾಗದಲ್ಲಿ ಬಹುಮಹಡಿ ಕಾರು ಪಾರ್ಕಿಂಗ್ ನಿರ್ಮಿಸಲು ಸ್ಮಾರ್ಟ್ ಸಿಟಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಅವರು ಸೂಚಿಸಿದರು.
ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲು ರೈಲ್ವೆ ಇಲಾಖೆ 30 ಕೋಟಿ ರೂ. ಅಂದಾಜುಪಟ್ಟಿಗೆ ಒಪ್ಪಿಗೆ ನೀಡಲಾಗಿದ್ದು, ಈ ಸಂಬಂಧ ಈಗಾಗಲೇ ಮೊದಲ ಕಂತು 10 ಕೋಟಿ ರೂ. ಮೊತ್ತವನ್ನು ದಕ್ಷಿಣ ರೈಲ್ವೆಯಲ್ಲಿ ಠೇವಣಿ ಇಡಲಾಗಿದೆ. ಈ ಕಾಮಗಾರಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲು ರೈಲ್ವೆ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಹಾನಗರ ಪಾಲಿಕೆ ವಿವಿಧ ವಾರ್ಡುಗಳಲ್ಲಿ ಒಳಚರಂಡಿ ಯುಜಿಡಿ ವಿಸ್ತರಣೆ ಕಾಮಗಾರಿ ಹಾಗೂ ಯುಜಿಡಿ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ನೂತನ ಒಳಚರಂಡಿ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.
ಸಭೆಯಲ್ಲಿ ಮಂಗಳೂರು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಸ್ಮಾರ್ಟ್ಸಿಟಿ ಕಾಮಗಾರಿಗಳ ಮಾಹಿತಿ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ದಿನೇಶ್ ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ಡಿಸಿಪಿ ವಿನಯ್ ಗಾಂವ್ಕರ್ ಮತ್ತಿತರರು ಸಭೆಯಲ್ಲಿ ಇದ್ದರು.
ಜಿಪಿಎಸ್ ರಹಿತ ಬಸ್ಗಳ ಪರ್ಮೀಟ್ ರದ್ದು
ಮಂಗಳೂರು ಸ್ಮಾರ್ಟ್ಸಿಟಿ ಯೋಜನೆಯಡಿ ಏಕೀಕೃತ ಸಾರಿಗೆ ವ್ಯವಸ್ಥೆಗೆ ಕಮಾಂಡ್ ಕಂಟ್ರೋಲ್ ರೂಂ ತೆರೆಯಲಾಗಿದೆ. ಇದರಿಂದ ನಗರದಲ್ಲಿ ಸಂಚರಿಸುವ ವಾಹನಗಳ ಸಂಚಾರ ನಿರ್ವಹಣೆ ಟ್ರಾಕಿಂಗ್ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಸಂಚರಿಸುತ್ತಿರುವ ಖಾಸಗಿ ಬಸ್ಗಳಲ್ಲಿ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಲು ದ.ಕ. ಜಿಲ್ಲಾ ಸಿಟಿ ಬಸ್ ಮಾಲಿಕರ ಸಂಘದ ಅಧ್ಯಕ್ಷರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದರು.
ಸಾರ್ವಜನಿಕರ ಸುರಕ್ಷತೆ ಹಾಗೂ ನಗರದ ಸಂಚಾರ ನಿರ್ವಹಣೆ ಉತ್ತಮ ಪಡಿಸಲು ಖಾಸಗಿ ಬಸ್ಗಳಲ್ಲಿ ಜಿಪಿಎಸ್ ಅಳವಡಿಸುವುದು ಅಗತ್ಯ ವಾಗಿದೆ. ಈಗಾಗಲೇ ಕೆಲವು ಬಸ್ಗಳಲ್ಲಿ ಅಳವಡಿಸಿರುವ ಜಿಪಿಎಸ್ನ್ನು ತೆಗೆದು ಹಾಕಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳು ಜಿಪಿಎಸ್ ಅಳವಡಿಸದಿದ್ದರೆ, ಅಂತಹ ಬಸ್ಗಳ ಪರ್ಮೀಟ್ ರದ್ದುಪಡಿಸಲು ಆರ್ಟಿಎಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.







