ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕ ಪ್ರಜಾಪ್ರಭುತ್ವದ ಕಗ್ಗೊಲೆ: ವಿಧಾನ ಪರಿಷತ್ ಸದಸ್ಯ ಪಿ.ಆರ್ ರಮೇಶ್
ಬೆಂಗಳೂರು, ಆ.21: ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕವಾದರೆ ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್ ರಮೇಶ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಪ್ರಕಾರ ಸ್ಥಳಿಯ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಆದರೆ ಕಾಲಕಾಲಕ್ಕೆ ಚುನಾವಣೆ ನಡೆಸದೆ, ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಸರಕಾರ ತನಗೆ ಬೇಕಾದ ಹಾಗೆ ಮಾಡಿಕೊಂಡು ಹೋಗುವ ಚಿಂತನೆಯಲ್ಲಿದೆ. ಆದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.
ಸರಕಾರದ ವರ್ತನೆ ನೋಡಿದರೆ, ಯಾವುದೇ ಕಾರಣಕ್ಕೂ ಚುನಾವಣೆ ಮಾಡದೆ ಮುಂದೂಡುವ ಯೋಚನೆಯಲ್ಲಿದೆ. ಆದರೆ ಇದು ಸಂವಿಧಾನ ವಿರೋಧಿಯಾಗಿದೆ. 2006 ರಲ್ಲಿಯೂ ಚುನಾವಣೆ ಮಾಡಬೇಕಿತ್ತು. ಆದರೆ ರಾಜ್ಯ ಸರಕಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಇದ್ದಾಗ 2006 ರಿಂದ 2010ರ ವರೆಗೆ ಚುನಾವಣೆ ಮುಂದೂಡಿಕೆಯಾಗಿತ್ತು. ಮೂರೂವರೆ ವರ್ಷಗಳ ಕಾಲ ಚುನಾವಣೆ ಇಲ್ಲದೆ ಆಡಳಿತಾಧಿಕಾರಿಗಳನ್ನು ಇಟ್ಟುಕೊಂಡು ಆಡಳಿತ ಮಾಡಿತ್ತು. ಕಡೆಗೆ ಕೋರ್ಟ್ನಿಂದ ಆರ್ಡರ್ ತಂದ ಮೇಲೆ ಚುನಾವಣೆ ಮಾಡಿದರು ಎಂದು ತಿಳಿಸಿದರು.
1996ರಿಂದ ಸಂವಿಧಾನ ಬದ್ಧ ಚುನಾವಣೆಗಳು ನಡೆದಿವೆ. ಹೀಗಾಗಿ 1988ರಲ್ಲಿ 6 ತಿಂಗಳು ಅಧಿಕಾರ ವಿಸ್ತರಣೆಯಾದಂತೆ ಈಗ ಆಗಲು ಸಾಧ್ಯವಿಲ್ಲ. ಆಗ ಕೇವಲ ರಾಜ್ಯ ಶಾಸನ ಇತ್ತು. ಆ ಪ್ರಕಾರ ರಾಜ್ಯ ಸರಕಾರ ಅಧಿಕಾರ ವಿಸ್ತರಣೆ ಮಾಡಿತ್ತು. ಆದರೆ ಈಗ ರಾಜ್ಯ ಸರಕಾರಕ್ಕೂ ಈ ಅಧಿಕಾರ ಇಲ್ಲ, ಸಂವಿಧಾನ ಬದ್ಧವಾಗಿಯೇ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಬಿಎಂಪಿಯ ಪ್ರಸ್ತುತ ಕೌನ್ಸಿಲ್ ಅವಧಿ ಸೆ.10ಕ್ಕೆ ಕೊನೆಗೊಳ್ಳಲಿದೆ. ಈಗಾಗಲೇ ಕೋವಿಡ್ ಕೆಲಸಗಳು ಇರುವ ಹಿನ್ನೆಲೆ 5 ವರ್ಷ ಪೂರ್ಣಗೊಂಡರೂ ಅಧಿಕಾರ ವಿಸ್ತರಣೆ ಮಾಡಿ ಎಂದು ಪಾಲಿಕೆ ಸದಸ್ಯರು ಸರಕಾರದ ಬಳಿ ಮನವಿ ಮಾಡಿದ್ದಾರೆ. ಆದರೆ ಕಾನೂನಿನಲ್ಲಿ ಅವಕಾಶ ಇರದ ಹಿನ್ನೆಲೆ ಹಾಗೂ ಚುನಾವಣಾ ಸಿದ್ಧತೆಗಳು ಪೂರ್ಣಗೊಳ್ಳದ ಹಿನ್ನೆಲೆ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ.