ಡಾ.ಎಂ.ಪ್ರಭಾಕರ ಜೋಶಿಗೆ ‘ಸಾರಂಗ್ ಸಮ್ಮಾನ್’ ಪ್ರಶಸ್ತಿ ಪ್ರದಾನ
ಮಂಗಳೂರು, ಆ.22: ಹಿರಿಯ ಯಕ್ಷಗಾನ ವಿಮರ್ಶಕ ಹಾಗೂ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಅವರಿಗೆ ಸಂತ ಅಲೋಶಿಯಸ್ ಕಾಲೇಜಿನ ‘ರೇಡಿಯೋ ಸಾರಂಗ್’ ಸಮುದಾಯ ಬಾನುಲಿಯ ‘ಸಾರಂಗ್ ಸಮ್ಮಾನ್’ ಪ್ರಶಸ್ತಿಯನ್ನು ಬಾನುಲಿಯ ನಿರ್ದೇಶಕ ಫಾ.ಮೆಲ್ವಿನ್ ಪಿಂಟೋ ಶುಕ್ರವಾರ ಪ್ರದಾನ ಮಾಡಿದರು.
ಈ ಸಂದರ್ಭ ಸಮುದಾಯ ಬಾನುಲಿಯ ‘ಹೃದಯ ರಾಗ’ ನೇರ ಸಂವಾದ ಕಾರ್ಯಕ್ರಮವೂ ಜರುಗಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭಾಕರ ಜೋಶಿ ‘ಯಕ್ಷಗಾನ ಕಲೆಯು ಬಹುಮುಖಿ ಆಯಾಮಗಳನ್ನು ಹೊಂದಿದೆ. ಪ್ರದರ್ಶನ, ಪ್ರಯೋಗ, ಸಂಶೋಧನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಬೆಳೆದಿದೆ. ಈ ಬೆಳವಣಿಗೆಗೆ ಸಮೂಹ ಮಾಧ್ಯಮಗಳ ಕೊಡುಗೆ ಅಪಾರ. ಇಂದು ಯಕ್ಷಗಾನ ಲೋಕಲ್ ಆಗಿ ಉಳಿದಿಲ್ಲ. ಅದು ಗ್ಲೋಕಲ್ ಆಗಿದೆ ಎಂದು ಹೇಳಿದರು.
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂವಾದವನ್ನು ನಡೆಸಿಕೊಟ್ಟರು. ರೋಶನ್ ಕುಲಶೇಖರ, ಸೈಫುಲ್ಲಾ ಕುತ್ತಾರ್, ಶ್ವೇತಾ, ಎಲಿಟಾ ಉಪಸ್ಥಿತರಿದ್ದರು. ಆರ್.ಜೆ.ಅಭಿಷೇಕ್ ಶೆಟ್ಟಿ ಸ್ವಾಗತಿಸಿದರು. ಎಡ್ವರ್ಡ್ ಲೋಬೋ ತೊಕ್ಕೊಟ್ಟು ವಂದಿಸಿದರು. ಬಿಂದಿಯಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.