ಕೋಮುಗಲಭೆ ನಡೆಸಲು ಸಂಘ ಪರಿವಾರದ ಷಡ್ಯಂತ್ರ : ಎಸ್ಡಿಪಿಐ
ಮಂಗಳೂರು, ಆ. 22: ದ.ಕ. ಜಿಲ್ಲೆಯಲ್ಲಿ ಜನರು ಹಲವು ವರ್ಷಗಳಿಂದ ‘ಶಾಂತಿ ಸೌಹಾರ್ದ’ತೆ ಮತ್ತು ಸಾಮರಸ್ಯದಿಂದ ಬದುಕುತ್ತಿದ್ದಾರೆ.ಇದರ ನಡುವೆ ಸಂಘಪರಿವಾರದ ದುಷ್ಕರ್ಮಿಗಳು ಹಲವು ದುಷ್ಕೃತ್ಯಗಳನ್ನು ನಡೆಸುವ ಮೂಲಕ ಜಿಲ್ಲೆಯ ಶಾಂತಿಯನ್ನು ಕೆದಡಲು ಪ್ರಯತ್ನ ಪಡುತ್ತಿ ದ್ದಾರೆ ಎಂದು ಎಸ್ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್. ಆಪಾದಿಸಿದ್ದಾರೆ.
ಅಲ್ಪಸಂಖ್ಯಾತ ಭವನದ ಮೇಲೆ ದಾಳಿ, ಆಲಾಡಿಯಲ್ಲಿ ಶರೀಫ್ ಎಂಬ ವ್ಯಕ್ತಿಯ ಹತ್ಯಾಯತ್ನ, ಮುಲ್ಕಿಯ ನೌಶಾದ್ ಎಂಬ ವ್ಯಕ್ತಿಯ ಹತ್ಯಾ ಯತ್ನ, ಕಲ್ಲಡ್ಕ ಸಮೀಪದ ಪರನೀರು ಎಂಬಲ್ಲಿ ದಲಿತ ವ್ಯಕ್ತಿಗೆ ಕ್ಷುಲ್ಲಕ ಕಾರಣಕ್ಕಾಗಿ ಮಾರಣಾಂತಿಕ ಹಲ್ಲೆ, ಜಾನುವಾರು ಸಾಗಾಟಗಾರರ ಮೇಲೆ ದಾಳಿ ಇದೆಲ್ಲದರ ಮುಂದುವರಿದ ಭಾಗವಾಗಿ ಪಂಪ್ವೆಲ್ ಮಸೀದಿಗೆ ಸೋಡಾ ಬಾಟಲಿ ಎಸೆದು ಕೋಮು ಗಲಭೆ ನಡೆಸಲು ವ್ಯವಸ್ಥಿತವಾಗಿ ಷಡ್ಯಂತರ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದರೂ ಕೂಡ ದುಷ್ಕೃತ್ಯಗಳು ಮುಂದುವರೆಯುತ್ತಲೇ ಇದೆ. ಪೊಲೀಸರು ದುಷ್ಕರ್ಮಿಗಳ ಮೇಲೆ ಕಠಿಣ ಸೆಕ್ಷನ್ ಹಾಕದೆ ಲಘು ಸೆಕ್ಷನ್ ಹಾಕಿ ಕೂಡಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದೇ ಇದಕ್ಕೆ ಕಾರಣವಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಘಟನೆ. ಹುಸಿಬಾಂಬ್ ಕರೆ ಮತ್ತು ಬೆದರಿಕೆ ಸಂದೇಶ ನಿರಂತರವಾಗಿ ನಡೆಯುತ್ತಿದೆ. ಇದನ್ನು ಕೂಡ ಒಂದು ಸಮುದಾಯಕ್ಕೆ ಎತ್ತಿಕಟ್ಟುವ ಪ್ರಯತ್ನವು ನಡೆದಿದೆ ಎಂದು ಆಪಾದಿಸಿದ್ದಾರೆ.
ಪೊಲೀಸ್ ಇಲಾಖೆಯ ಕ್ಷಿಪ್ರಗತಿಯ ತನಿಖೆಯಿಂದ ಈ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಆದಾಗ್ಯೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇದೆಲ್ಲದರ ಹಿಂದಿರುವ ಮೂಲವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.