35 ಕೋ.ರೂ. ಮೌಲ್ಯದ ನಕಲಿ ಎನ್ ಸಿಇಆರ್ ಟಿ ಪುಸ್ತಕಗಳನ್ನು ಮುದ್ರಿಸಿದ ಆರೋಪ: ಬಿಜೆಪಿ ನಾಯಕನ ಪುತ್ರನ ವಿರುದ್ಧ ಎಫ್ಐಆರ್

ಹೊಸದಿಲ್ಲಿ: 35 ಕೋಟಿ ರೂ. ಮೌಲ್ಯದ ನಕಲಿ ಎನ್ ಸಿಇಆರ್ ಟಿ ಪುಸ್ತಕಗಳನ್ನು ಮುದ್ರಿಸಿದ ಆರೋಪದಲ್ಲಿ ಬಿಜೆಪಿ ನಾಯಕ ಸಂಜೀವ್ ಗುಪ್ತಾರ ಪುತ್ರ ಸಚಿನ್ ಗುಪ್ತಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
35 ಕೋಟಿ ರೂ. ಮೌಲ್ಯದ ಪುಸ್ತಕಗಳು, ಆರು ಪ್ರಿಂಟಿಂಗ್ ಮೆಷಿನ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ 12 ಮಂದಿಯನ್ನು ಬಂಧಿಸಲಾಗಿದೆ.
ಮೀರತ್ ನಲ್ಲಿ ಈ ಜಾಲ ಕಾರ್ಯಾಚರಿಸುತ್ತಿದ್ದು, ಸಚಿನ್ ಗುಪ್ತಾ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಪರ್ತಾಪುರ್ ನ ಅಚ್ಚೊಂಡಾದ ವೇರ್ ಹೌಸ್ ಮತ್ತು ಪ್ರಿಂಟಿಂಗ್ ಪ್ರೆಸ್ ನ ಮಾಲಕನಾಗಿದ್ದಾನೆ ಸಚಿನ್ ಗುಪ್ತಾ. ಸದ್ಯ ಆತ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ನಕಲಿ ಪುಸ್ತಕಗಳನ್ನು ಹರ್ಯಾಣ, ಉತ್ತರಾಖಂಡ ಮತ್ತು ದಿಲ್ಲಿಗಳಿಗೆ ಕಳುಹಿಸಲಾಗುತ್ತಿತ್ತು. 9ರಿಂದ 12ನೆ ತರಗತಿವರೆಗಿನ 364 ಬಗೆಯ ಪುಸ್ತಕಗಳನ್ನು ಮುದ್ರಿಸಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





