ಡಾ. ಅಹ್ಮದ್ ಹಾಜಿ ಮೊಹಿಯುದ್ದೀನ್ಗೆ ನುಡಿನಮನ
ಪುತ್ತೂರು: ಸೀರತ್ ಕಮಿಟಿ ಸ್ಥಾಪಕರಾದ ಉದ್ಯಮಿ ಡಾ. ಬಿ. ಅಹ್ಮದ್ ಹಾಜಿ ಮೊಹಿಯುದ್ದೀನ್ ತುಂಬೆ ಅವರಿಗೆ ಪುತ್ತೂರಿನ ಸೀರತ್ ಕಮಿಟಿ ವತಿಯಿಂದ ಶನಿವಾರ ಅಪರಾಹ್ನ ನುಡಿನಮನ ಹಾಗೂ ದುವಾ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೀರತ್ ಕಮಿಟಿ ಕಾರ್ಯಾಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಆಕರ್ಷಣ್ ಮಾತನಾಡಿ ಡಾ. ಅಹ್ಮದ್ ಹಾಜಿಯವರು ಉದ್ಯಮ, ವಾಣಿಜ್ಯ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದವರಾಗಿದ್ದು, ದೂರ ದೃಷ್ಠಿಯನ್ನು ಹೊಂದಿರುವ ಓರ್ವ ಮುತ್ಸದ್ದಿಯಾಗಿದ್ದರು. ಸಮುದಾಯದ ಬಗ್ಗೆಯೂ ಅವರಿಗೆ ಅವರ ಚಿಂತನೆ ಮಾದರಿಯಾಗಿತ್ತು. ಅಲ್ಲದೆ ಕೋಮು ಸೌಹಾರ್ದ ತೆಯಲ್ಲಿಯೂ ಅವರಿಗೆ ಸ್ಪಷ್ಟವಾಗಿ ಕಲ್ಪನೆಗಳು ಹಾಗೂ ಸ್ಪಷ್ಟತೆಗಳಿತ್ತು. ಅವರ ಬದುಕು ಹಾಗೂ ನಡೆಗಳು ಎಲ್ಲರಿಗೂ ಪ್ರೇರಣೆಯಾಗಿದ್ದು, ಮುಂದಿನ ಪೀಳಿಗೆ ಅವರ ಕೊಡುಗೆಯನ್ನು ನೆನಪಿಸಿಕೊಳ್ಳುವ ಅಗತ್ಯವಿದೆ ಎಂದರು.
ಪಠ್ಯ ಪುಸ್ತಕದಲ್ಲಿ ಬರಲಿ
ಜಿಲ್ಲೆಯಲ್ಲಿ ಔದ್ಯಮಿಕ. ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಅಹ್ಮದ್ ಹಾಜಿ ತುಂಬೆ ಅವರ ಬಗ್ಗೆ ಮುಂದಿನ ಪೀಳಿಗೆ ಅರಿತುಕೊಳ್ಳುವ ನಿಟ್ಟಿನಲ್ಲಿ ಪಠ್ಯ ಪುಸ್ತಕದಲ್ಲಿ ಅವರ ಬಗ್ಗೆ ಪಠ್ಯವಾಗಿ ಬರಬೇಕಾಗಿದೆ ಎಂದು ಕೆ.ಪಿ. ಆಹ್ಮದ್ ಹಾಜಿ ಆಕರ್ಷಣ್ ಆಗ್ರಹಿಸಿದರು.
ಪುತ್ತೂರು ಸೀರತ್ ಕಮಿಟಿ ಸದಸ್ಯರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಝೀಝ್ ಬಸ್ತಿಕಾರ್ ಮತ್ತು ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು ನುಡಿನಮನ ಸಲ್ಲಿಸಿದರು. ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ರಹಿಮಾನ್ ಉಸ್ತಾದ್ ದುವಾ ನೆರವೇರಿಸಿ ದರು. ಅಬ್ದುಲ್ ರಹಿಮಾನ್ ಮೌಲವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಸಾಬ್ ವಂದಿಸಿದರು.