ಭಾರೀ ಅವ್ಯವಹಾರ ಆರೋಪ: ಲ್ಯಾಪ್ಟಾಪ್ ಖರೀದಿಗೆ ಬಿಬಿಎಂಪಿ ಆಯುಕ್ತ ತಡೆ

ಬೆಂಗಳೂರು, ಆ. 23: ಲ್ಯಾಪ್ಟಾಪ್ ಖರೀದಿಯಲ್ಲಿ ಭಾರೀ ಅವ್ಯವಹಾರ ಕಂಡುಬಂದ ಹಿನ್ನೆಲೆ ಲ್ಯಾಪ್ಟಾಪ್ ಖರೀದಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಡೆ ನೀಡಿದ್ದಾರೆ.
ರಸ್ತೆ, ರಾಜಕಾಲುವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟಿದ್ದ ಸುಮಾರು 115 ಕೋಟಿ ರೂ. ಅನುದಾನದಲ್ಲಿ ವಿದ್ಯಾರ್ಥಿಗಳ ಆನ್ಲೈನ್ ತರಗತಿಗಳಿಗೆ ಸಹಾಯವಾಗಲೆಂದು ಬಿಬಿಎಂಪಿ ಖಾಸಗಿ ಸಂಸ್ಥೆಯಿಂದ ಲ್ಯಾಪ್ಟಾಪ್ ಖರೀದಿ ಮಾಡಲು ಮುಂದಾಗಿತ್ತು. 30ರಿಂದ 35 ಸಾವಿರ ರೂ. ಬೆಲೆಬಾಳುವ ಲ್ಯಾಪ್ಟಾಪ್ಗೆ 60 ಸಾವಿರ ರೂ. ನೀಡಿ ಖರೀದಿಸಲು ಮುಂದಾಗಿತ್ತು ಎಂದು ತಿಳಿದು ಬಂದಿದೆ.
ಈ ವಿಚಾರ ತಿಳಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಬಗ್ಗೆ ಸಿಎಂ ಯಡಿಯೂರಪ್ಪರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಅಭಿವೃದ್ಧಿ ಹಣದಲ್ಲಿ ಲ್ಯಾಪ್ಟಾಪ್ ಖರೀದಿಯ ಅವಶ್ಯಕತೆ ಇಲ್ಲ. ಈ ರೀತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕುವಂತೆ ಸಿಎಂಗೆ ಮನವರಿಕೆ ಮಾಡಿದ್ದಾರೆ. ಆಯುಕ್ತರ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಲ್ಯಾಪ್ಟಾಪ್ ಖರೀದಿ ಮಾಡಲೇಬೇಕು ಎಂದು ಪಟ್ಟು ಹಿಡಿದಿರುವ ಕಾರ್ಪೋರೇಟರ್ಸ್ ಲ್ಯಾಪ್ ಟಾಪ್ ಖರೀದಿ ಮಾಡಿ ಅಥವಾ ಆನ್ಲೈನ್ ಕ್ಲಾಸ್ ರದ್ದು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ಸರಕಾರದ ಸೂಚನೆಯಂತೆ ಲ್ಯಾಪ್ಟಾಪ್ ಖರೀದಿ ಮಾಡದಂತೆ ಜಂಟಿ ಆಯುಕ್ತರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.







