ವಿದೇಶಿ ತಬ್ಲೀಗ್ ಜಮಾತ್ ಬಗ್ಗೆ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ: ಎಸ್ಡಿಪಿಐ

ಹೊಸದಿಲ್ಲಿ, ಆ.24: ವಿದೇಶಿ ತಬ್ಲೀಗಿಗಳ ಕುರಿತು ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ)ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಸ್ವಾಗತಿಸಿದ್ದಾರೆ.
ಭಾರತೀಯ ದಂಡ ಸಂಹಿತೆ-ಐಪಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ವಿದೇಶಿಯರ ಕಾಯ್ದೆಯ ವಿವಿಧ ಕಲಂಗಳಡಿ ಈ ವಿದೇಶಿ ತಬ್ಲೀಗಿಗಳ ಮೇಲೆ ಪ್ರಕರಣ ದಾಖಲಾಗಿತ್ತು. ಈ ಎಲ್ಲ 29 ಎಫ್ಐಆರ್ ಗಳನ್ನು ರದ್ದಪಡಿಸಿರುವ ಬಾಂಬೆ ಹೈಕೋರ್ಟ್, ಈ ತಬ್ಲೀಗಿಗಳನ್ನು ಬಲಿಪಶು ಮಾಡಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಾರ್ಚ್ ನಲ್ಲಿ ಹೊಸದಿಲ್ಲಿಯ ನಿಜಾಮುದ್ದೀನ್ ಮರ್ಕಝ್ನಲ್ಲಿ ಆಯೋಜಿಸಿದ್ದ ತಬ್ಲೀಗ್ ಜಮಾಅತ್ ಸಭೆಯಲ್ಲಿ ಪಾಲ್ಗೊಳ್ಳಲು ಭಾರತ ಸರಕಾರ ನೀಡಿರುವ ವಿಸಿಟಿಂಗ್ ವೀಸಾದಲ್ಲಿ ಅರ್ಜಿದಾರರು ಭಾರತಕ್ಕೆ ಆಗಮಿಸಿದ್ದರು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಕುರಿತು ವೀಸಾ ಷರತ್ತುಗಳಲ್ಲಿ ಯಾವುದೇ ನಿರ್ಬಂಧವಿರಲಿಲ್ಲ. ಕೋವಿಡ್-19 ಸೋಂಕಿನ ಕಾರಣದಿಂದಾಗಿ ಮಾರ್ಚ್ 23 ರಂದು ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆಯಾದ ನಂತರ ಅವರು ಹೊಸದಿಲ್ಲಿಯಲ್ಲಿ ಸಿಲುಕಿಕೊಂಡರು. ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರಿಗೆ ಸೌಲಭ್ಯ, ವಸತಿಗೃಹಗಳು ಮತ್ತು ಹೋಟೆಲ್ಗಳನ್ನು ಮುಚ್ಚಲಾಗಿತ್ತು. ಹೀಗಾಗಿ, ಅವರಿಗೆ ಉಳಿದುಕೊಳ್ಳಲು ಮಸೀದಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು. ಅವರು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಅಥವಾ ಜಿಲ್ಲಾಧಿಕಾರಿಯ ಆದೇಶವನ್ನೂ ಉಲ್ಲಂಘಿಸಿರಲಿಲ್ಲ.
ಅರ್ಜಿದಾರರು ದೇಶಕ್ಕೆ ಆಗಮಿಸುವಾಗಲೇ ಅವರನ್ನು ವಿಮಾನ ನಿಲ್ದಾಣಗಳಲ್ಲಿ ಕೊರೋನ ತಪಾಸಣೆ ನಡೆಸಲಾಗಿತ್ತು. ನೆಗೆಟಿವ್ ಇದ್ದವರನ್ನು ಮಾತ್ರ ವಿಮಾನ ನಿಲ್ದಾಣದಿಂದ ಹೊರಬರಲು ಅವಕಾಶ ಕಲ್ಪಿಸಲಾಗಿತ್ತು. ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ನ್ಯಾಯಪೀಠದ ವಿಭಾಗೀಯ ಪೀಠವು 29 ವಿದೇಶಿ ಪ್ರಜೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಲೇವಾರಿ ಮಾಡುವಾಗ, ಅವರ ವಿರುದ್ಧದ ಎಲ್ಲಾ ಎಫ್ಐಆರ್ ಗಳನ್ನು ರದ್ದುಪಡಿಸಿ, ಮಾಧ್ಯಮದ ಸುಳ್ಳು ಪ್ರಚಾರವನ್ನು ತೀವ್ರವಾಗಿ ಟೀಕಿಸಿದೆ. ಮಾತ್ರವಲ್ಲ ಈ ಅಸಹಾಯಕ ಅರ್ಜಿದಾರರನ್ನು ಬಲಿಪಶು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಸಾಂಕ್ರಾಮಿಕ ಅಥವಾ ವಿಪತ್ತು ಸಂಭವಿಸಿದಾಗ ಬಲಿಪಶುಗಳನ್ನು ಹುಡುಕಲು ಸರಕಾರ ಪ್ರಯತ್ನಿಸುತ್ತದೆ. ಮೇಲಿನ ಸಂದರ್ಭಗಳಲ್ಲಿ ಈ ವಿದೇಶಿಯರನ್ನು ಬಲಿಪಶುಗಳನ್ನಾಗಿ ಮಾಡಲು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬುದನ್ನು ತೋರಿಸುತ್ತದೆ. ಭಾರತದಲ್ಲಿ ಇತ್ತೀಚಿನ ಕೊರೋನ ಸೋಂಕಿನ ಅಂಕಿ ಅಂಶಗಳು, ಪ್ರಸ್ತುತ ಅರ್ಜಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬುದನ್ನು ಸ್ಪಷ್ಟಪಡಿಸಿದೆ. ಈ ತೀರ್ಪು, ಸರಕಾರ ಮತ್ತು ದ್ವೇಷದ ಕೊಳಕು ಕೋಮು ರಾಜಕೀಯ ಮಾಡುವ ಪಕ್ಷಪಾತದ ಮತ್ತು ಧರ್ಮಾಂಧ ಮಾಧ್ಯಮಗಳಿಗೆ ಬಲವಾದ ಹೊಡೆತವಾಗಿದೆ.
ದೇಶದ ನಾಗರಿಕರ ವಿರುದ್ಧ ಕೋಮು ತಾರತಮ್ಯ ಮತ್ತು ದ್ವೇಷವನ್ನು ಹರಡುವುದನ್ನು ಕೊನೆಗೊಳಿಸಬೇಕು. ಭಾರತದ ಸಂವಿಧಾನದಲ್ಲಿ ತಿಳಿಸಿರುವಂತೆ ಅವರೆಲ್ಲರನ್ನೂ ಸಮಾನವಾಗಿ ಪರಿಗಣಿಸುವಂತೆ ಸರಕಾರ ಮತ್ತು ಅದರ ಕೈಗೊಂಬೆ ಮಾಧ್ಯಮಗಳಿಗೆ ಶಾಫಿ ಕಿವಿ ಮಾತು ಹೇಳಿದ್ದಾರೆ.







