ಮೃತದೇಹ ಅದಲು-ಬದಲಾದ ಘಟನೆ : ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆ ಸ್ಪಷ್ಟೀಕರಣ
ಉಡುಪಿ, ಆ.24: ಕುಂದಾಪುರದ ನೇರಂಬಳ್ಳಿಯ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹ ಅದಲು-ಬದಲಾದ ಘಟನೆಯ ಕುರಿತಂತೆ ಅವರಿಗೆ ಚಿಕಿತ್ಸೆ ನೀಡಿದ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಅಧೀಕ್ಷಕರು ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಗಂಗಾಧರ್ ಆಚಾರ್ಯ (60) ಅವರನ್ನು ಜು.30ರಂದು ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಕೋವಿಡ್-19 ಸೋಂಕಿತರಾ ಗಿದ್ದರು ಮಾತ್ರವಲ್ಲ, ಬರುವಾಗಲೇ ನ್ಯುಮೋನಿಯಾದೊಂದಿಗೆ ತೀವ್ರ ಹೈಪೊಕ್ಸಿಯಾ (ರಕ್ತದಲ್ಲಿ ಆಮ್ಲಜನಕದ ಕೊರತೆ) ಕೂಡ ಇತ್ತು. ತಕ್ಷಣದಿಂದಲೇ ಅವರಿಗೆ ಸೂಕ್ತ ಚಿಕಿತ್ಸೆ ಪ್ರಾರಂಭಿಸಿದ್ದೇವೆ. ಅವರು ಕಬ್ಬಿಣದ ಕೆಲಸ ಮಾಡುವವರಾಗಿದ್ದರಿಂದ ಶ್ವಾಸಕೋಶ ಮತ್ತು ತೀವ್ರವಾದ ಉಸಿರಾಟದ ತೊಂದರೆ ಇತ್ತು. ಅಲ್ಲದೇ ಅದು ಸಮಯ ಕಳೆದಂತೆ ಹೆಚ್ಚಾಯಿತು. ನಾವು ಅವರಿಗೆ ಸೂಕ್ತ ಚಿಕಿತ್ಸೆಯೊಂದಿಗೆ ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ಮುಂದುವರಿಸಿದ್ದೆವು ಎಂದು ಸ್ಪಷ್ಟೀಕರಣದಲ್ಲಿ ತಿಳಿಸಲಾಗಿದೆ.
ಚಿಕಿತ್ಸೆಯ ಸಮಯದಲ್ಲಿ, ಚಿಕಿತ್ಸೆ ನೀಡಿದ ವೈದ್ಯಕೀಯ ತಂಡವು ರೋಗಿಯ ಮಗ ಮತ್ತು ಸೋದರಳಿನೊಂದಿಗೆ ಹಲವು ಬಾರಿ ರೋಗಿಯ ಸ್ಥಿತಿಯ ಬಗ್ಗೆ ಮಾತಾಡಿದೆ. ಅಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ದಾಖಲಾಗಿದ್ದ ರಿಂದ, ರೋಗಿಯ ಸಂಬಂಧಿಕರಿಗೆ ಯಾವುದೇ ರೀತಿಯಲ್ಲಿ ಹಣ ಪಾವತಿ ಮಾಡಲು ಹೇಳಲಿಲ್ಲ, ಅಲ್ಲದೇ ಅವರಿಂದ ಹಣ ಸ್ವೀಕರಿಸಿಲ್ಲ. ದುರದೃಷ್ಟವಶಾತ್, ನಮ್ಮ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ನ್ಯುಮೋನಿಯಾ ಮತ್ತು ತೀವ್ರ ಉಸಿರಾಟದ ತೊಂದರೆಯೊಂದಿಗೆ ಕೋವಿಡ್ 19 ರೋಗದಿಂದ ಆ.23ರ ಬೆಳಿಗ್ಗೆ ನಿಧನ ಹೊಂದಿದರು.
ಬೆಳಗ್ಗೆ 4:43ಕ್ಕೆಸಾವು ಸಂಭವಿಸಿದ್ದರಿಂದ ಮತ್ತು ಸಂಬಂಧಿಕರಿಗೆ ಹಸ್ತಾಂತರಿಸಲು 5-6 ಗಂಟೆಗಳು ಬೇಕಾಗಬಹುದಾದ್ದರಿಂದ, ನಾವು ದೇಹ ಉಬ್ಬುವುದನ್ನು ತಪ್ಪಿಸಲು ಎಲ್ಲಾ ಸರಿಯಾದ ಪ್ರಕ್ರಿಯೆಗಳೊಂದಿಗೆ (ದೇಹವಿರುವ ಚೀಲದಲ್ಲಿ ಗುರುತಿನ ಟ್ಯಾಗ್ಗಳನ್ನು ಒಳಗೊಂಡಂತೆ) ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಹಸ್ತಾಂತರಿಸಿದ್ದೇವೆ. ಈ ಸಮಯದಲ್ಲಿ ಸರಿಯಾದ ಕಾರಣವೇನೆಂದು ತಿಳಿಯದೆ, ರೋಗಿಯ ಅನೇಕ ಕುಟುಂಬ ಸದಸ್ಯರು, ಅವರ ಮಗ ಸಹಾ ಸೇರಿದಂತೆ, ಅವರ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮತ್ತು ಆಸ್ಪತ್ರೆಯ ವಿರುದ್ಧ ವಾಸ್ತವಿಕವಾಗಿ ತಪ್ಪಾದ ಮತ್ತು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಆ.5ನೇ ತಾರೀಖಿನ ನಂತರ ಇದುವರೆಗೆ ನಮ್ಮ ಆಸ್ಪತ್ರೆಯಲ್ಲಿ ಬೇರೆ ಯಾವುದೇ ಮರಣ ಸಂಭವಿಸಿಲ್ಲದ ಕಾರಣ ನಮ್ಮ ಆಸ್ಪತ್ರೆಯಿಂದ ಬೇರೆ ದೇಹವನ್ನು ಕಳುಹಿಸುವ ಸಾಧ್ಯತೆಯೇ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅನೇಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ನಮ್ಮ ಆಸ್ಪತ್ರೆ ಯಿಂದ ಸರಿಯಾದ ವಿವರಗಳನ್ನು ಪರಿಶೀಲಿಸದೆ ಭಾವನಾತ್ಮಕ ಹಾಗೂ ಉದ್ವೇಗ ಪೂರಿತ ಮಾತುಗಳನ್ನು ಪ್ರಸಾರ ಮಾಡಿವೆ. ಇದರ ಪರಿಣಾಮ ನಮ್ಮ ಸೇವೆಗಳು ಮತ್ತು ಆಸ್ಪತ್ರೆಯನ್ನು ದೂಷಿಸುವ ಮೂಲಕ ನೂರಾರು ನಕಾರಾತ್ಮಕ ಕಾಮೆಂಟ್ ಗಳು ಫೇಸ್ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.
ನಾವು ಕೋವಿಡ್-19ಗೆ ಮೀಸಲಾದ ಆಸ್ಪತ್ರೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅತಿ ಹೆಚ್ಚಿನ ಅಪಾಯವಿದ್ದರೂ ಸಹಾ ಎಡೆಬಿಡದೆ ಕೆಲಸ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಏಕಪಕ್ಷೀಯ ಹೇಳಿಕೆಗಳು ನಮ್ಮನ್ನು ತೀವ್ರವಾಗಿ ನೋಯಿಸಿದೆ ಎಂದು ವೈದ್ಯಕೀಯ ಅಧೀಕ್ಷಕರ ಸ್ಪಷ್ಟೀಕರಣದಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.