ಕೊರಚ ಸಮುದಾಯದ ಮೂವರ ಕೊಲೆ ಪ್ರಕರಣ: ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಧರಣಿ
ಬಳ್ಳಾರಿ, ಆ.24: ನಾಯಕನಹಟ್ಟಿಯ ಅಲೆಮಾರಿ ಕೊರಚ ಸಮುದಾಯದ ಮೂವರ ಕೊಲೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಯುವಜನ ತಾಲೂಕು ಒಕ್ಕೂಟದ ಕಾರ್ಯಕರ್ತರು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಸೋಮವಾರ ನಗರದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೊಲೆ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಕೋರಿದರು.
ಚಳ್ಳಿಕೇರಿಯ ಅಲೆಮಾರಿ ಕೊರಚ ಸಮುದಾಯದ ಶೀನಪ್ಪ ಹಾಗೂ ಅವರ ಮಕ್ಕಳಾದ ಮಾರೇಶ ಮತ್ತು ಯಲ್ಲೇಶ ಅವರನ್ನು ಕೊಲೆ ಮಾಡಲಾಗಿದೆ. ಶೀನಪ್ಪ ಕೊಲಂಹಳ್ಳಿಯಲ್ಲಿ ಹಂದಿ ಸಾಕಾಣಿಕೆ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಆದರೆ, ರಾತ್ರಿ ವೇಳೆ ದುಷ್ಕರ್ಮಿಗಳು ಖಾರದ ಪುಡಿ ಕಣ್ಣಿಗೆ ಎರಚಿ, ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆ ಮಾಡಿರುವವರನ್ನು ಪತ್ತೆ ಹಚ್ಚಿ, ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಅಲ್ಲದೇ, ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.





