ತಲಪಾಡಿ: ಕಾಸರಗೋಡು ಬಿಜೆಪಿಯಿಂದ ಅಂತಾರಾಜ್ಯ ಪಾಸ್ ಉಲ್ಲಂಘನಾ ಪ್ರತಿಭಟನೆ
ಕೇರಳದಿಂದ ಕರ್ನಾಟಕಕ್ಕೆ ತೆರಳಲು ಪಾಸ್ ವ್ಯವಸ್ಥೆ ವಿರುದ್ಧ ಹೋರಾಟ
ಮಂಜೇಶ್ವರ, ಆ.25: ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ದೇಶನವಿದ್ದರೂ ಕೇರಳ ಸರಕಾರ ಅದರ ವಿರುದ್ಧವಾಗಿ ಕರ್ನಾಟಕಕ್ಕೆ ತೆರಳಲು ಪಾಸ್ ಮೂಲಕ ನಿಯಂತ್ರಣ ಮಾಡುವ ಕ್ರಮದ ವಿರುದ್ಧ ಕಾಸರಗೋಡು ಬಿಜೆಪಿ ಇಂದು ಪಾಸ್ ಉಲ್ಲಂಘಿಸಿ ತಲಪಾಡಿ ಕರ್ನಾಟಕಕ್ಕೆ ತೆರಳುವ ಮೂಲಕ ಪ್ರತಿಭಟನೆ ನಡೆಸಿತು.
ಅನಗತ್ಯ ಪಾಸ್ ಮತ್ತು ನಿಯಂತ್ರಣ ಹೇರುವುದರಿಂದ ನೂರಾರು ಮಂದಿ ತಮ್ಮ ಉದ್ಯೋಗ ಮತ್ತು ವ್ಯಾಪಾರ ನಡೆಸಲಾಗದೆ ಕಷ್ಟಪಡುತ್ತಿದ್ದಾರೆ. ಆದರೂ ಕರ್ನಾಟಕಕ್ಕೆ ಮುಕ್ತ ಪ್ರವೇಶ ನಿಷೇಧಿಸಿರುವ ಕೇರಳ ರಾಜ್ಯ ಸರಕಾರದ ನಿಲುವಿನ ವಿರುದ್ಧ ಉಗ್ರ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮೇಲ್ಪಟ್ಟು ನೇತಾರರ ಸಭೆ ಈ ಬಗ್ಗೆ ನಿರ್ಣಯ ಕೈಗೊಂಡಿದೆ. ಅದರಂತೆ ಇಂದು ಬೆಳಗ್ಗೆ ನಡೆದ ಪ್ರತಿಭಟನೆಯನ್ನು ತಲಪಾಡಿ ಗಡಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ನೇತಾರರಾದ ಸುಧಾಮ ಗೋ ಸಾಡ, ಪದ್ಮನಾಭ ಕಡಪ್ಪುರ, ಯಾದವ ಬಡಾಜೆ ಮೊದಲಾದವರು ನೇತೃತ್ವ ನೀಡಿದರು.
ಕೋವಿಡ್ ಮಾನದಂಡಗಳನ್ನು ಪಾಲಿಸಿ ನಡೆದ ಪ್ರತಿಭಟನೆಯಲ್ಲಿ ನೇತಾರರು ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.