ಬೆಂಗರೆ: ಡಿವೈಎಫ್ಐಯಿಂದ ಧರಣಿ

ಮಂಗಳೂರು, ಆ.25: ಸರಕಾರಿ ಆಸ್ಪತ್ರೆ ಬಲಪಡಿಸಲು, ಖಾಸಗಿ ಆಸ್ಪತ್ರೆ ನಿಯಂತ್ರಿಸಲು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಹಾಗು ಕೊರೋನ ಹೆಸರಲ್ಲಿ ಖಾಸಗೀ ಆಸ್ಪತ್ರೆಗಳ ಲೂಟಿಕೋರ ನೀತಿಯನ್ನು ಖಂಡಿಸಿ, ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ವಿರೋಧಿಸಿ, ಎಲ್ಲರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ ಒತ್ತಾಯಿಸಿ ಇಂದು ಬೆಂಗರೆ ಪ್ರದೇಶದ ನಗರ ಆರೋಗ್ಯ ಕೇಂದ್ರದ ಎದುರು ಡಿವೈಎಫ್ಐ ಕಾರ್ಯಕರ್ತರು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕೊರೋನ ರೋಗದ ವಿರುದ್ದ ಸರಕಾರಗಳು ಕೈಗೊಂಡ ಪರಿಹಾರ ಕ್ರಮಗಳೆಲ್ಲ ವಿಫಲಗೊಂಡಿದೆ. ರಾಜ್ಯ ಸರಕಾರ ಕೊರೊನಾ ಹೆಸರಲ್ಲಿ ಮಾಸ್ಕ್, ವೆಂಟಿಲೇಟರ್ ಇನ್ನಿತರ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ದರ ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ಸ್ಥಳೀಯ ನಗರ ಪಾಲಿಕೆ ಆಡಳಿತ ಈ ಸಂದರ್ಭದಲ್ಲಿ ಕಳೆದ ಎರಡು ತಿಂಗಳುಗಳಿಂದ ಕುಡಿಯುವ ನೀರನ್ನು ಶುದ್ದೀಕರಿಸದೆ ಅದರಲ್ಲಿರುವ ವಿಷಕಾರಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸದೆ ವಿತರಿಸಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಿದೆ. ಬಿಜೆಪಿ ಸರಕಾರದ ಈ ಆಡಳಿತ ನೀತಿಯು ಕೊರೋನಕ್ಕಿಂತಲೂ ಅಪಾಯಕಾರಿಯಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದರು.
ಡಿವೈಎಫ್ ಐ ಜಿಲ್ಲಾದ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ಬೆಂಗರೆ ತೀರಾ ಹಿಂದುಳಿದ ಪ್ರದೇಶ ಇಲ್ಲಿನ ನಿವಾಸಿಗಳನ್ನು ಮೂಲಭೂತ ಸೌಕರ್ಯಗಳಿಂದ ವಂಚಿಸಲಾಗಿದೆ. ಕನಿಷ್ಠ ಹಕ್ಕುಪತ್ರ , ನೀರು, ಆರೋಗ್ಯ ಕಾಳಜಿಯನ್ನು ನೀಡಲು ಸಾಧ್ಯವಾಗಿಲ್ಲ .ಇರುವ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು, ದಿನದ 24 ಗಂಟೆ ವೈದ್ಯರು ಸಹಿತ ನುರಿತ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದು.
ಈ ವೇಳೆ ಡಿವೈಎಫ್ಐ ಜಿಲ್ಲಾ ಮುಖಂಡರಾದ ಸುನೀಲ್ ತೇವುಲ, ನೌಶಾದ್ ಬೆಂಗರೆ, ಬೆಂಗರೆ ಗ್ರಾಮ ಸಮಿತಿಯ ಅದ್ಯಕ್ಷ ಹನೀಫ್ ಬೆಂಗರೆ ಕಾರ್ಯದರ್ಶಿ ರಿಝ್ವಾನ್, ಬಿಲಾಲ್, ನಾಸಿರ್ ಮುಂತಾದವರು ಉಪಸ್ಥಿತರಿದ್ದರು.








