ಕುರ್ನಾಡು ಮತ್ತು ಬಾಳೆಪುಣಿ - ಕೈರಂಗಳ ಗ್ರಾಪಂ ಎದುರು ಡಿವೈಎಫ್ಐನಿಂದ ಭಿತ್ತಿಪತ್ರ ಪ್ರದರ್ಶನ
ಮುಡಿಪು, ಆ. 25: ಸರಕಾರಿ ಆಸ್ಪತ್ರೆಯನ್ನು ಬಲಪಡಿಸಲು ಮತ್ತು ಖಾಸಗಿ ಆಸ್ಪತ್ರೆಯನ್ನು ನಿಯಂತ್ರಿಸಲು ಹಾಗೂ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ, ಕೊರೋನ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ ದಂಧೆಯನ್ನು ಖಂಡಿಸಿ, ಎಲ್ಲರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ ಒತ್ತಾಯಿಸಿ ಇಂದು ಡಿವೈಎಫ್ಐ ಕೈರಂಗಳ, ಬಾಳೆಪುಣಿ, ಮುಡಿಪು ಘಟಕದ ನೇತೃತ್ವದಲ್ಲಿ ಕುರ್ನಾಡು ಹಾಗೂ ಬಾಳೆಪುಣಿ ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತ್ಯೇಕ ಭಿತ್ತಿಪತ್ರ ಪ್ರದರ್ಶನ ನಡೆಸಿ, ಮನವಿ ಸಲ್ಲಿಸಲಾಯಿತು.
ಎರಡೂ ಕಡೆ ನಡೆದ ಸಭೆಯನ್ನುದ್ದೇಶಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮಾತನಾಡಿದರು. ಸಭೆಯಲ್ಲಿ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಡಿವೈಎಫ್ಐ ಮುಡಿಪು ಘಟಕದ ಅಧ್ಯಕ್ಷ ರಝಾಕ್ ಮುಡಿಪು, ಕಾರ್ಯದರ್ಶಿ ರಿಯಾಜ್, ಬಾಳೆಪುಣಿ ಕೈರಂಗಳ ಘಟಕದ, ಕಾರ್ಯದರ್ಶಿ ಖಲಂದರ್, ಮುಖಂಡರಾದ ಶರೀಫ್ ವಿದ್ಯಾನಗರ, ನಿಜಾರ್ ಮುಡಿಪು, ಶಾಫಿ ಮುಡಿಪು, ನಿಜಾರ್ ಬಿಕೆ ಕಾಯಾರ್ ಉಪಸ್ಥಿತರಿದ್ದರು.