ಚಾರ ಕೆ.ರತ್ನಾಕರ್ ಶೆಟ್ಟಿ ಬೆಳಗಾಂ ನಿಧನ
ಹೆಬ್ರಿ, ಆ.25: ಧಾರ್ಮಿಕ, ಸಾಮಾಜಿಕ, ರಾಜಕೀಯ ಧುರೀಣ, ಹೆಬ್ರಿ ಚಾರ ಕೂತಾಡಿ ಮನೆತನದ ಕೆ.ರತ್ನಾಕರ್ ಶೆಟ್ಟಿ ಬೆಳಗಾಂ(65) ಮಂಗಳವಾ ಹೃದಯಾಘಾತದಿಂದ ನಿಧನರಾದರು.
ಬೆಳಗಾಂನಲ್ಲಿ ತನ್ನ ಉದ್ಯಮವನ್ನು ಸ್ಥಾಪಿಸಿ, ಹಲವರಿಗೆ ಉದ್ಯೋಗದಾತ ರಾಗಿ ಸಮಾಜಸೇವಕರಾಗಿ ಗುರುತಿಸಿಕೊಂಡ ಇವರು, ಸತೀಶ್ ಜಾರಕಿಹೋಳಿ ಅವರ ಅತಿ ಆಪ್ತರಾಗಿದ್ದರು. ಬೆಳಗಾವಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ, ದಿ.ಬೆಳಗಾಂ ಮರ್ಚಂಟ್ಸ್ ಕೊಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರಾಗಿ, ಹೆಸ್ಕಾಮ್ ಬೆಳಗಾವಿ ಉತ್ತರದ ನಾಮ ನಿರ್ದೇಶನ ಸದಸ್ಯರಾಗಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಬೆಳಗಾವಿ ಹನುಮಾನ್ ನಗರದ ಮುರಳೀಧರ ಕಾಲೋನಿ ನಿವಾಸಿಯಾಗಿರುವ ಇವರು, ಹೆಬ್ರಿ ಚಾರದ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ರತ್ನಾಕರ ಶೆಟ್ಟಿ ಅವರ ಜನಸೇವೆಗೆ ಹಲವು ಪ್ರಶಸ್ತಿ ಗೌರವಗಳು ದೊರೆತಿವೆ. ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.