ಕಬ್ಬನ್ ಪಾರ್ಕ್ ನಲ್ಲಿ ಸಂಚಾರ ನಿಷೇಧಕ್ಕೆ ಆಗ್ರಹಿಸಿ ಸರಕಾರಕ್ಕೆ ಪತ್ರ
![ಕಬ್ಬನ್ ಪಾರ್ಕ್ ನಲ್ಲಿ ಸಂಚಾರ ನಿಷೇಧಕ್ಕೆ ಆಗ್ರಹಿಸಿ ಸರಕಾರಕ್ಕೆ ಪತ್ರ ಕಬ್ಬನ್ ಪಾರ್ಕ್ ನಲ್ಲಿ ಸಂಚಾರ ನಿಷೇಧಕ್ಕೆ ಆಗ್ರಹಿಸಿ ಸರಕಾರಕ್ಕೆ ಪತ್ರ](https://www.varthabharati.in/sites/default/files/images/articles/2020/08/25/256422-1598370801.jpg)
ಬೆಂಗಳೂರು, ಆ.25: ಲಾಲ್ಬಾಗ್ ಮಾದರಿಯಲ್ಲಿ ಕಬ್ಬನ್ಪಾರ್ಕ್ ನಲ್ಲಿಯೂ ಸಂಪೂರ್ಣವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಬೇಕು ಎಂದು ಹಲವರು ಸರಕಾರಕ್ಕೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಈ ಸಂಬಂಧ ಸರಕಾರಕ್ಕೆ ವಿವಿಧ ಸಂಘಟನೆಗಳು ಪತ್ರ ಬರೆದು ಲಾಲ್ಬಾಗ್ ಮಾದರಿಯಲ್ಲಿ ಕಬ್ಬನ್ಪಾರ್ಕ್ ನಲ್ಲಿಯೂ ವಾಹನ ಸಂಚಾರಕ್ಕೆ ಕಡಿವಾಣ ಹಾಕಬೇಕು. ಇದರಿಂದ ವಾಯು ಮಾಲಿನ್ಯವಾಗುವುದು ತಪ್ಪಲಿದೆ ಎಂದು ಪ್ರತಿಪಾದಿಸಿದ್ದಾರೆ.
ಮಾರ್ಚ್ ನಲ್ಲಿ ಲಾಕ್ಡೌನ್ ಘೋಷಿಸಿದ ಸಂದರ್ಭದಲ್ಲಿ ಕಬ್ಬನ್ಪಾರ್ಕ್ನಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಕ್ಕೊಳಪಡಿಸಲಾಗಿತ್ತು. ಆಗ ವಾಯು ಮಾಲಿನ್ಯ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದದು ವರದಿಯಾಗಿದೆ. ಈಗ ಸರಕಾರ ಆದೇಶದಂತೆ ಪುನಃ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು, ಅದರಿಂದ ವಾಯು ಮಾಲಿನ್ಯ ಮತ್ತೆ ಅಧಿಕವಾಗುತ್ತಿದೆ.
ಸರಕಾರವು ವಾಹನ ಸಂಚಾರಕ್ಕೆ ಅನುಮತಿ ನೀಡುವ ಸಂಬಂಧ ಪುನರ್ ಪರಿಶೀಲನೆ ಮಾಡಬೇಕು. ಈ ಹಿಂದೆ ಬೆಂಗಳೂರು ಸಂಚಾರಿ ಪೊಲೀಸರಿಗೂ ವಾಹನ ಸಂಚಾರ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಸರಕಾರ ಕೂಡಲೇ ಈ ಸಂಬಂಧ ಚಿಂತನೆ ಮಾಡಬೇಕು ಎಂದು ಸಂಘಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.