ರ್ಯಾಪರ್ ಚಂದನ್ ಶೆಟ್ಟಿ ಅಯೋಗ್ಯ: ಪ್ರೊ.ಪಿ.ವಿ.ನಂಜರಾಜೇ ಅರಸ್ ವಾಗ್ದಾಳಿ

ಮೈಸೂರು,ಆ.25: “ಕೋಲು ಮಂಡೆ” ಹಾಡಿನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಹಿನ್ನಲೆ ರ್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಂದನ್ ಶೆಟ್ಟಿ ಅಯೋಗ್ಯ. ಮನೆಯಲ್ಲಿ ಗೌರಿ ಗಣೇಶನನ್ನು ಪೂಜಿಸುತ್ತೇವೆ. ಗೌರಿ ಪೂಜೆಗೆ ಚಂದನ್ ಶೆಟ್ಟಿ ತನ್ನ ಗರ್ಲ್ ಫ್ರೆಂಡ್ನ ಬಿಕಿನಿ ಹಾಕಿಸಿಕೊಂಡು ಹೋಗುತ್ತಾನಾ ಎಂದು ಪ್ರಶ್ನಿಸಿದರು.
ಮಹದೇಶ್ವರ ಜನಪದ ಹಾಡುಗಳೆಂದರೆ ಅದರಲ್ಲಿ ನಮ್ಮ ಸಂಸ್ಕೃತಿ ಇದೆ. ಹುಡುಗಿಯರನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಂಡು ಹಾಡಿನಲ್ಲಿ ಅಶ್ಲೀಲವಾಗಿ ಬಿಂಬಿಸುತ್ತಾನೆ. ನಮ್ಮ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸ ಮಾಡಬಾರದು. ಹೊಸತನ ಕೊಡುತ್ತೇವೆ, ಇಂಗ್ಲೆಂಡ್ನ ರೀತಿ ಮ್ಯೂಸಿಕ್ ಮಾಡುತ್ತೇವೆ ಅಂತಾರೆ. ಲವ್ ಗಿವ್ ಸಾಂಗ್ಗಳನ್ನು ಅವರಿಷ್ಟ ಬಂದಂತೆ ಮಾಡಿಕೊಳ್ಳಲಿ. ಆದರೆ ನಮ್ಮ ಸಂಸ್ಕೃತಿಯನ್ನು ಸಾಯಿಸುವ ಕೆಲಸ ಆಗಬಾರದು ಎಂದು ಹೇಳಿದರು.
ರ್ಯಾಪರ್ ಸಾಂಗ್ ಕೇಳೋದು ಹಿತವಿರಬಹುದು. ಸಾಂಸ್ಕೃತಿಕವಾಗಿ, ದೇವಿ ಹಿನ್ನಲೆ, ಪ್ರಭಾವಳಿಯನ್ನ ಇಟ್ಟುಕೊಂಡಿದ್ದೇವೆ. ನಮ್ಮ ಸಂಸ್ಕೃತಿಯ ತತ್ವಕ್ಕೆ ಅವಮಾನ ಮಾಡುವಂತ ಕೆಲಸ ಆಗಬಾರದು. ಕೂಡಲೇ ಆ ಹಾಡು ಹಿಂಪಡೆಯಬೇಕು ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಆಗ್ರಹಿಸಿದರು.





