ಕಲ್ಕಟ್ಟ: ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧಿಸಿ ಗ್ರಾ.ಪಂ. ಅಧಿಕಾರಿಗಳಿಗೆ ಮನವಿ
ಉಳ್ಳಾಲ: ಮಂಜನಾಡಿ ಗ್ರಾಮದ ಕಲ್ಕಟ್ಟ ಬಳಿ ಜನನಿಬಿಡ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪಂಚಾಯತ್ ಅನುಮತಿ ನೀಡಿರುವುದನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಕಲ್ಕಟ್ಟ ನಾಗರಿಕ ಸಮಿತಿ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೆ ಮನವಿ ಅರ್ಪಿಸಿದರು.
ಕಲ್ಕಟ್ಟ ರಸ್ತೆ ಬದಿಯಲ್ಲಿರುವ ಸರ್ಕಾರಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ನೀಡಲು ಪಂಚಾಯತ್ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಗುದ್ದಲಿ ಪೂಜೆ ಕೂಡಾ ನಡೆದಿತ್ತು. ಈ ಮಾಹಿತಿ ಮೇರೆಗೆ ಸ್ಥಳೀಯ ರು ತೀವ್ರ ಆಕ್ಷೇಪ ಕೂಡಾ ವ್ಯಕ್ತಪಡಿಸಿದರಲ್ಲದೇ ಪಂಚಾಯತ್ ಮಾಜಿ ಅಧ್ಯಕ್ಷ, ಸದಸ್ಯ ರನ್ನು ಕೂಡಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಸೀದಿ, ಮದ್ರಸ, ಶಾಲೆ, ದೇವಸ್ಥಾನ ಇರುವ ಜಾಗದ ಸಮೀಪದ ಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸುವುದಕ್ಕೆ ಎಷ್ಟು ಸರಿ, ಇದನ್ನು ಶೀಘ್ರದಲ್ಲೇ ವಾಪಸ್ ಪಡೆದು ಜನರಿಗೆ ಬದುಕಲು ನೆಮ್ಮದಿ ಯ ವಾತಾವರಣ ಒದಗಿಸಿ ಎಂದು ಒತ್ತಾಯಿಸಿದ ಅವರು ಘಟಕ ನಿರ್ಮಾಣ ಮಾಡುವ ತೀರ್ಮಾನ ಕೈಬಿಡದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಮೋನು ಕಲ್ಕಟ್ಟ, ಮುಹಮ್ಮದ್ ಮಾಸ್ಟರ್, ಡಾ.ಹರಿ ಕಿಶೋರ್ ಭಟ್, ಹಸೈನಾರ್ ಕಟ್ಟೆ, ಕುಂಞಿ ಬಾವ್ ಹಾಜಿ ಕಂಡಿಕ, ಪಿಲಿಪ್ ಡಿ ಸೋಜ, ಹರೀಶ್ ಬಟ್ಯಡ್ಕ, ರಫೀಕ್ ಕಲ್ಕಟ್ಟ, ಇಬ್ರಾಹಿಂ ಕಂಡಿಕ, ಕೆ.ಪಿ.ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.