ಬೆಂಗಳೂರು ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ದಲಿತ, ಮಹಿಳಾ ಸೇರಿ 30 ಸಂಘಟನೆಗಳಿಂದ ಸಿಎಂಗೆ ಪತ್ರ

ಬೆಂಗಳೂರು, ಆ.26: ಡಿಜೆ ಹಳ್ಳಿ, ಕೆಜಿ ಹಳ್ಳಿ ಹಿಂಸಾಚಾರ ಪ್ರಕರಣದ ತನಿಖೆಯನ್ನು ನ್ಯಾಯಾಂಗ ವಿಚಾರಣೆಗೆ ಒಪ್ಪಿಸುವಂತೆ ಆಗ್ರಹಿಸಿ ದಲಿತ, ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ.
ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಸ್ಲಮ್ ನಿವಾಸಿ ಸಂಘಟನೆಗಳು, ಮುಸ್ಲಿಂ ಸಂಘನೆಗಳು, ಕಾರ್ಮಿಕ ಹಾಗು ವಕೀಲರ ಸಂಘಟನೆಗಳು, ಲೈಂಗಿಕ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಗಳನ್ನು ಒಳಗೊಂಡು 30 ಸಂಘಟನೆಗಳು ಹಾಗೂ 287 ಸಾಮಾಜಿಕ ಕಾರ್ಯಕರ್ತರು ಪತ್ರಕ್ಕೆ ಸಹಿ ಹಾಕುವ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿವೆ.
ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಯನ್ನು ಖಂಡಿಸಿರುವ ವಿವಿಧ ಸಂಘಟನೆಗಳು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಯಾವುದೇ ಸ್ಥಾನಮಾನ ಇರುವುದಿಲ್ಲ ಹಾಗೂ ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇದರೊಂದಿಗೆ ಹಿಂಸೆಗೆ ಕಾರಣವಾದ, ಜನರ ಭಾವನೆಗಳನ್ನು ಕೆರಳಿಸಲೆಂದೇ ಮಾಡಿದ ಪ್ರಚೋದನಕಾರಿ ಪೋಸ್ಟ್ ಮತ್ತು ಹಿಂಸೆ ಸಂಬಂಧಪಟ್ಟಂತೆ ಸಮಗ್ರ ಮತ್ತು ನಿಷ್ಪಕ್ಷಪಾತವಾದ ವಿಚಾರಣೆ ಆಗಬೇಕು ಹಾಗೂ ಎಲ್ಲಾ ತಪ್ಪಿತಸ್ಥರಿಗೆ ಕಾನೂನಿನ ಅನುಸಾರ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗಿದೆ.
ಡಿಜೆ ಹಳ್ಳಿಯ ಘಟನೆಯ ನಂತರ ಬಂಧಿಸಲಾದ ಅಮಾಯಕರನ್ನು ಬಿಡುಗಡೆ ಮಾಡಬೇಕು. ಹಾಗೂ ಬಂಧಿತ ವ್ಯಕ್ತಿಗಳೊಂದಿಗೆ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಬೇಕು, ಬಂಧಿತ ವ್ಯಕ್ತಿಗಳು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಅವರ ಕುಟುಂಬದ ಸದಸ್ಯರಿಗೆ ತಿಳಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಆ ಪ್ರದೇಶಗಳಲ್ಲಿ ಸಾಮಾನ್ಯ ಜನಜೀವನ ಪ್ರಾರಭವಾಗುವಂತೆ ಮಾಡಬೇಕು ಹಾಗೂ ಅಲ್ಲಿ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಇರುವ ಪೊಲೀಸ್ ಪಡೆಯನ್ನು ತೆಗೆಯಬೇಕು. ಹಿಂಸಾಚಾರಕ್ಕೆ ಕಾರಣರಾದವರು ಯಾರೇ ಆಗಿರಲಿ ಅವರ ಮೇಲೆ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವ್ಯಕ್ತಿಗಳ ಮತ್ತು ಸಂಘಟನೆಗಳ ಮೀಡಿಯಾ ಟ್ರಯಲ್ ಅಥವಾ ಬಲಿಪಶು ಮಾಡುವುದನ್ನು ತಡೆಗಟ್ಟಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.







