ಕೇರಳ-ಕರ್ನಾಟಕ ಗಡಿ ಬಂದ್ ತೆರವಿಗೆ ಹೈಕೋರ್ಟ್ ಆದೇಶ
ಜಾಲ್ಸೂರು, ಪಾಣತ್ತೂರು, ಮಾಣಿಮೂಲೆ, ಪೆರ್ಲ ಗಡಿ ರಸ್ತೆಗಳು ಅಂತಾರಾಜ್ಯ ಸಂಚಾರಕ್ಕೆ ಮುಕ್ತ
ಕಾಸರಗೋಡು, ಆ.27: ಕೇರಳ-ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ನಾಲ್ಕು ರಸ್ತೆಗಳಲ್ಲಿ ಮಾಡಿರುವ ಗಡಿ ಬಂದ್ ಅನ್ನು ತೆರವುಗೊಳಿಸುವಂತೆ ಕೇರಳ ಸರಕಾರಕ್ಕೆ ರಾಜ್ಯ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಈ ಕುರಿತು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬುಧವಾರ ಮಹತ್ವದ ಈ ಮಧ್ಯಾಂತರ ಆದೇಶ ನೀಡಿದೆ.
ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳಾದ ಜಾಲ್ಸೂರು, ಪಾಣತ್ತೂರು, ಮಾಣಿಮೂಲೆ, ಪೆರ್ಲ ಗಡಿಗಳಲ್ಲಿ ವಿಧಿಸಲಾಗಿರುವ ಬಂದ್ ತೆರವುಗೊಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಕೊರೋನ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ-ಕಾಸರಗೋಡು ನಡುವಿನ 14ಕ್ಕೂ ಅಧಿಕ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿತ್ತು ಇದರಿಂದ ಉಭಯ ಜಿಲ್ಲೆಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿತ್ತು. ಹೈಕೋರ್ಟ್ ಆದೇಶದಿಂದ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಚಾರ ಮುಕ್ತಗೊಳ್ಳುವುದರೊಂದಿಗೆ ಜನತೆಯಲ್ಲಿ ನಿರಾಳ ಉಂಟಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ದೇಶಾದ್ಯಂತ ಅಂತಾರಾಜ್ಯ ರಸ್ತೆಗಳ ಬಂದ್ ತೆರವುಗೊಳಿಸುವಂತೆ ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿತ್ತು. ಆದರೂ ಕೇರಳ- ಕರ್ನಾಟಕ ಗಡಿ ಬಂದ್ ಅನ್ನು ಕೇರಳ ಸರಕಾರ ತೆರವುಗೊಳಿಸಿರಲಿಲ್ಲ. ಇದರ ವಿರುದ್ಧ ಶ್ರೀಕಾಂತ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.