ಬಹುಕೋಟಿ ವಂಚನೆ ಆರೋಪ: ಕಣ್ವ ಗ್ರೂಪ್ ಕಂಪೆನಿ ಎಂಡಿ ಬಂಧನ

ಬೆಂಗಳೂರು, ಆ.27: ಬಹುಕೋಟಿ ವಂಚನೆ ಆರೋಪ ಪ್ರಕರಣ ಸಂಬಂಧ ಕಣ್ವ ಗ್ರೂಪ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯ ಎಂಬವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ, 7 ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೂರು ದಿನಗಳ ಹಿಂದೆ ನಂಜುಂಡಯ್ಯನನ್ನು ವಶಕ್ಕೆ ಪಡೆದಿದ್ದ ಇಡಿ ತನಿಖಾಧಿಕಾರಿಗಳು, ಗುರುವಾರ 34ನೆ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡರು.
ಗ್ರಾಹಕರಿಂದ ಪಡೆದಿದ್ದ ಅಸಲು ಹಾಗೂ ಬಡ್ಡಿ ಹಣವನ್ನು ಹಿಂದಿರುಗಿಸದೆ ವಂಚಿಸಿರುವ ಆರೋಪ ಬಂಧಿತ ನಂಜುಂಡಯ್ಯ ಮೇಲಿದ್ದು, ಸುಮಾರು 80 ಕೋಟಿ ರೂ. ವಂಚನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಾಜಾಜಿನಗರದಲ್ಲಿ ಕಣ್ವ ಸಮೂಹ ಸಂಸ್ಥೆಗಳ ಕೇಂದ್ರ ಕಚೇರಿಯಿದ್ದು, ಸೌಹಾರ್ದ ಕೋ ಆಪರೇಟಿವ್ ಸೂಸೈಟಿಯನ್ನು ಕೂಡಾ ನಂಜುಂಡಯ್ಯ ಹೊಂದಿದ್ದಾರೆ.
ಏನಿದು ಆರೋಪ?: ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ.12.5 ರಷ್ಟು ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ, ಬಳಿಕ ಅಸಲು ಹಾಗೂ ಬಡ್ಡಿ ಹಣ ನೀಡದೆ ವಂಚಿಸಿದ ಆರೋಪದಡಿ 2019ನೇ ನವೆಂಬರ್ನಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





