ನ್ಯಾಯಾಲಯಗಳ ಮಾದರಿಯಲ್ಲೇ ಮ್ಯಾಜಿಸ್ಟ್ರೇಟ್ ತನಿಖೆ: ಬೆಂಗಳೂರು ನಗರ ಡಿಸಿ ಜಿ.ಎನ್. ಶಿವಮೂರ್ತಿ
ಬೆಂಗಳೂರು ಹಿಂಸಾಚಾರ ಪ್ರಕರಣ

ಬೆಂಗಳೂರು, ಆ. 27: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆಯನ್ನು ನ್ಯಾಯಾಲಯಗಳ ಮಾದರಿಯಲ್ಲೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದ್ದಾರೆ.
ಗುರುವಾರ ನಗರದ ದೇವರಜೀವನಹಹಳ್ಳಿ, ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಆ.11ರಂದು ನಡೆದ ಗಲಭೆ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದರು. ಅಲ್ಲದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಾರ್ಗಸೂಚಿಯಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭ ಮಾಡುತ್ತೇನೆ, ಸೆಪ್ಟೆಂಬರ್ 2ರಿಂದ ಈ ಪ್ರಕರಣದ ಸಂಪೂರ್ಣ ವಿಚಾರಣೆ ಪ್ರಾರಂಭವಾಗುತ್ತದೆ. ಮ್ಯಾಜಿಸ್ಟ್ರೇಟ್ ತನಿಖೆಯ ವರದಿ ನೀಡಲು ಸರಕಾರ ಮೂರು ತಿಂಗಳು ಗಡುವು ನೀಡಿದೆ ಎಂದು ಹೇಳಿದರು.
ಗಲಭೆ ಪ್ರಕರಣ ಸಂಬಂಧ ಈವರೆಗೆ ಒಟ್ಟು 388 ವ್ಯಕ್ತಿಗಳನ್ನು ಬಂಧಿsಸಲಾಗಿದೆ. ಡಿ.ಜೆ.ಹಳ್ಳಿಯಲ್ಲಿ 55 ಹಾಗೂ ಕೆ.ಜಿ.ಹಳ್ಳಿ ಠಾಣೆಯಲ್ಲಿ 16 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಸಾಮಾನ್ಯ ಜನರು ಸೇರಿದಂತೆ 53 ಪೊಲೀಸ್, 15 ಕೆಎಸ್ಆರ್ಪಿ ಸಿಬ್ಬಂದಿ ಸೇರಿ ಒಟ್ಟು 70 ಮಂದಿಗೆ ಗಾಯಗಳಾಗಿವೆ ಮತ್ತು ಪ್ರಕರಣದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಗಲಭೆಯಲ್ಲಿ 126 ವಾಹನಗಳು, ಕಟ್ಟಡಗಳು ಬೆಂಕಿಯಿಂದ ಸುಟ್ಟು ಹೋಗಿವೆ. ಸುಟ್ಟ ವಾಹನಗಳ ನಷ್ಟದ ಒಟ್ಟು ಮೊತ್ತ ಸಾರಿಗೆ ಅಧಿಕಾರಿಗಳು ಅಂದಾಜಿಸಿ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಗೋಲಿಬಾರ್ ಮತ್ತು ಗಲಭೆಯ ಸಂಪೂರ್ಣ ವಿಚಾರಣೆಯ ಬಳಿಕ ವರದಿ ನೀಡುತ್ತೇನೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು, ಹೇಳಿಕೆಗಳು, ಸಾಕ್ಷಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡಬಹುದು. ನೀಡಿದ ಮಾಹಿತಿಯನ್ನು ನಾವು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು. ಇದೇ ಸಮಯದಲ್ಲಿ ಪೂರ್ವ ವಲಯದ ಪೊಲೀಸ್ ಉಪ ಆಯುಕ್ತ ಡಾ.ಶರಣಪ್ಪ ಎಸ್.ಢಗೆ, ಎಸಿಪಿ, ಸಿಸಿಬಿ ಅಧಿಕಾರಿಗಳು ಮತ್ತು ಬೆಂಗಳೂರು ಉತ್ತರ ವಿಭಾಗದ ತಹಶಿಲ್ದಾರರು ಉಪಸ್ಥಿತರಿದ್ದರು.
ಹಾನಿ ವಾಹನಗಳ ವರದಿ ಸಿದ್ಧ
ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಠಾಣೆ ಹಾಗೂ ಇನ್ನಿತರೆ ವಾಹನಗಳಿಗೆ ಹಾನಿಯಾಗಿದ್ದು, ಈ ಸಂಬಂಧ ಆರ್ಟಿಒ ಅಧಿಕಾರಿಗಳು ವಾಹನಗಳ ದಾಖಲಾತಿ ಪರಿಶೀಲನೆ ನಡೆಸಿ ನಷ್ಟದ ಅಂದಾಜು ಮೌಲ್ಯದ ಬಗ್ಗೆ ವರದಿ ಸಿದ್ಧಪಡಿಸಿದ್ದಾರೆ.
ಇಲ್ಲಿನ ಕಸ್ತೂರಿನಗರ ಹಾಗೂ ಯಶವಂತಪುರದ ಕಚೇರಿಯಲ್ಲಿ ತಲಾ 33 ವಾಹನಗಳನ್ನು ನೀಡಲಾಗಿದ್ದು, ಹಾನಿಯಾಗಿರುವ ವಾಹನಗಳ ಈಗಿನ ಬೆಲೆ ಒಟ್ಟು 46 ಲಕ್ಷ ರೂ. ಎನ್ನಲಾಗಿದೆ. ಗಲಭೆ ನಡೆಯುವಾಗ ಕಿಡಿಗೇಡಿಗಳು ಕಲ್ಲಿನಿಂದ ಜಜ್ಜಿಯೂ ಕೆಲ ವಾಹನಗಳನ್ನು ಹಾನಿ ಮಾಡಿದ್ದಾರೆ. ಒಟ್ಟು 33 ವಾಹನಗಳನ್ನು ಯಶವಂತಪುರ ಠಾಣೆಗೆ ಕೊಟ್ಟಿದ್ದರು. ಈ ಪೈಕಿ ಪೊಲೀಸರ ಒಂದು ವಾಹನವನ್ನೂ ಆರ್ಟಿಒ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಇದುವರೆಗೂ ಕೆಲ ವಾಹನಗಳಿಗೆ ದಾಖಲೆ ಇಲ್ಲ. ಇನ್ನೂ, ಕೆಲ ವಾಹನಗಳ ದಾಖಲೆ ಇಲ್ಲದ ಕಾರಣ ಅದರ ಅಂದಾಜು ಮೌಲ್ಯವನ್ನು ಈಗಿನ ಬೆಲೆಯಲ್ಲಿ ಕಡಿಮೆ ಮಾಡಿ ಹಾಕಲಾಗಿದೆ ಎಂದು ಇನ್ಸ್ ಪೆಕ್ಟರ್ ಮಾಹಿತಿ ನೀಡಿದ್ದಾರೆ.







