ಆದಿತ್ಯನಾಥ್ ಸರಕಾರದ ಹಿರಿಯ ಅಧಿಕಾರಿಗಳನ್ನು ಟೀಕಿಸಿ ಟ್ವೀಟ್ ಮಾಡಿದ ಬಿಜೆಪಿ ಶಾಸಕನಿಗೆ ಶೋಕಾಸ್ ನೋಟಿಸ್
ಲಕ್ನೋ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಸರಕಾರದ ವರ್ಚಸ್ಸು ಸುಧಾರಿಸುವಂತಾಗಲು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಬೇಕು ಎಂದು ಕಳೆದ ವಾರ ಟ್ವೀಟ್ ಮಾಡಿದ್ದ ಗೋರಖಪುರದ ಶಾಸಕ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ರಾಜ್ಯದ ಪೊಲೀಸ್ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ), ಡಿಜಿಪಿ ಸಹಿತ ಹಿರಿಯ ಅಧಿಕಾರಿಗಳನ್ನು ಬದಲಾಯಿಸಬೇಕು, ಎಂದು ತಮ್ಮ ಟ್ವೀಟ್ನಲ್ಲಿ ಅಗರ್ವಾಲ್ ಹೇಳಿದ್ದರು.
ತಾವು ಈ ರೀತಿ ಟ್ವೀಟ್ ಮಾಡಿದ ಪ್ರತಿಫಲವೆಂಬಂತೆ ಲಖೀಂಪುರ್ ಖೇರಿ ಎಂಬಲ್ಲಿನ ಬಿಜೆಪಿ ಕಾರ್ಯಕರ್ತನ ಭಾವನ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು ಎಂದು ವಿವಾದಾಸ್ಪದ ಟ್ವೀಟ್ ಡಿಲೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಶಾಸಕ ಹೇಳಿಕೊಂಡಿದ್ದರು.
ಇದೀಗ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ ಪಿ ಎಸ್ ರಾಥೋರ್ ಜಾರಿಗೊಳಿಸಿರುವ ಶೋಕಾಸ್ ನೋಟಿಸಿನಲ್ಲಿ ಶಾಸಕನ ಟ್ವೀಟ್ಗಳು ಅಶಿಸ್ತಿಗೆ ಸಮ ಆಗಿದೆ, ಒಂದು ವಾರದೊಳಗೆ ಉತ್ತರಿಸಬೇಕು ಎಂದು ಸೂಚಿಸಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಸೂಚನೆ ಮೇರೆಗೆ ನೋಟಿಸ್ ಜಾರಿಗೊಳಿಸಲಾಗಿದೆ.