‘ಗೋಡೆ ಕಟ್ಟುವವರು’ ಕವನ ಸಂಕಲನ ಬಿಡುಗಡೆ
ಮಂಗಳೂರು, ಆ.28: ಕವಯತ್ರಿ ಆಯಿಶಾ ಯು.ಕೆ. ಉಳ್ಳಾಲ ಅವರ ಚೊಚ್ಚಲ ಕವನ ಸಂಕಲನ ‘ಗೋಡೆ ಕಟ್ಟುವವರು’ ಬಿಡುಗಡೆಯ ಸರಳ ಕಾರ್ಯಕ್ರಮವು ಶುಕ್ರವಾರ ನಗರದಲ್ಲಿ ನಡೆಯಿತು.
ಶಾಂತಿ ಎಜುಕೇಶನಲ್ ಟ್ರಸ್ಟ್ ನಿರ್ದೇಶಕ ಕೆ.ಎಂ.ಶರೀಫ್ ಪುಸ್ತಕ ಬಿಡುಗಡೆಗೊಳಿಸಿ ಡಿಜಿಟಲ್ ಯುಗದಲ್ಲಿ ಕವನ, ಸಾಹಿತ್ಯ, ಬರವಣಿಗೆ ಕಡಿಮೆಯಾಗುತ್ತದೆ ಎಂಬ ಆತಂಕ ಬೇಡ. ಸಾಮಾಜಿಕ ಜಾಲತಾಣ ಸಹಿತ ಮಲ್ಟಿ ಮೀಡಿಯಾಗಳನ್ನು ಬಳಕೆ ಮಾಡಿ ಉತ್ತಮ ಸಾಹಿತ್ಯ ರಚನೆಗೆ ಸಾಕಷ್ಟು ಅವಕಾಶವಿದೆ. ಮಕ್ಕಳಿಗೆ ಕನ್ನಡ ಓದಲು, ಬರೆಯಲು ಪ್ರೋತ್ಸಾಹ ನೀಡಬೇಕು. ಇಲ್ಲದಿದ್ದರೆ ಬರೆದರೂ ಓದುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಪುಸ್ತಕ ಪರಿಚಯಿಸಿ ಮಾತನಾಡಿದ ಶರ್ಫುದ್ದೀನ್ ಬಿ.ಎಸ್. ಸಾಮಾಜಿಕ ಸಮಸ್ಯೆಗಳು ಸೇರಿದಂತೆ ಪ್ರಸಕ್ತ ಸನ್ನಿವೇಶದ ಸಂವೇದನೆಗಳು ಈ ಕವನ ಸಂಕಲನದಲ್ಲಿ ಅಡಕವಾಗಿವೆ ಎಂದರು. ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಶಮೀನಾ ಅಫ್ಶಾನ್ ಉಪಸ್ಥಿತರಿದ್ದರು. ಕವಯತ್ರಿ ಆಯಿಶಾ ಉಳ್ಳಾಲ್ ಪ್ರಾಸ್ತಾವಿಕ ಮಾತನಾಡಿದರು. ಅಬ್ದುಲ್ ಜಲೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.