ಕೆಂಪೇಗೌಡ ಉದ್ಯಾನವನ ನಿರ್ಮಾಣದಲ್ಲಿ ಭಾರೀ ಹಗರಣ: ಶಾಸಕ ಆರ್. ಮಂಜುನಾಥ್ ಆರೋಪ
ಬೆಂಗಳೂರು, ಆ.28: ನಗರದ ಮಲ್ಲಸಂದ್ರದಲ್ಲಿ ನಿರ್ಮಿಸಲಾಗಿರುವ ಕೆಂಪೇಗೌಡ ಉದ್ಯಾನವನ ನಿರ್ಮಾಣದಲ್ಲಿ ಭಾರೀ ಹಗರಣ ನಡೆದಿದೆ ಎಂದು ದಾಸರಹಳ್ಳಿ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಆರೋಪ ಮಾಡಿದ್ದಾರೆ.
ಮಾಜಿ ಬಿಜೆಪಿ ಶಾಸಕ ಎಸ್.ಮುನಿರಾಜು ಹಾಗೂ ಕಾರ್ಪೋರೇಟರ್ ಲೋಕೇಶ್, ದಾಸರಹಳ್ಳಿಯ ಬಿಬಿಎಂಪಿ ವಾರ್ಡ್ 13ರಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಲ್ಲಸಂದ್ರ ವಾರ್ಡಿನ ಸರ್ವೆ ನಂಬರ್ 33ರಲ್ಲಿ ಪಾಲಿಕೆಗೆ ಹಸ್ತಾಂತರವಾಗದ ರೆವಿನ್ಯೂ ಜಮೀನಿನಲ್ಲಿ ಕೆ.ಆರ್.ಐ.ಡಿ.ಎಲ್ ಯೋಜನೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಅಭಿವೃದ್ಧಿ ಕಾಮಗಾರಿಗೆ ಯಾವುದೇ ಟೆಂಡರ್ ಕರೆದಿಲ್ಲ. ಬದಲಿಗೆ ಆ ವಾರ್ಡಿನ ಕಾರ್ಪೋರೇಟರ್ ಆದ ಲೋಕೇಶ್ ಅವರು ಬೇನಾಮಿಯಾಗಿ ಟೆಂಡರ್ ಗುತ್ತಿಗೆಗೆ ಪಡೆದು ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಭಿವೃದ್ಧಿ ಕಾಮಗಾರಿಯಲ್ಲಿ ಪಾರ್ಕ್, ಆಡಿಟೋರಿಯಂ, ಸೇರಿದಂತೆ ವಿವಿಧ ಕಾಮಗಾರಿ ಹೆಸರಿನಲ್ಲಿ 23 ಕೋಟಿ 75 ಲಕ್ಷ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಮಲ್ಲಸಂದ್ರ ವಾರ್ಡಿನ ಸರ್ವೆ ನಂಬರ್ 33 ರಲ್ಲಿಒಟ್ಟಾರೆ 35 ಎಕರೆ ಜಮೀನನ್ನು ಭಾಗಶಃ ಒತ್ತುವರಿ ಮಾಡಿದ್ದು, ವೋಟಿಗಾಗಿ ಇದೇ ಸರ್ವೆ ನಂಬರಿನಲ್ಲಿ 7 ಎಕರೆ ಜಮೀನನ್ನು ಒತ್ತುವರಿ ಮಾಡಿ, ಪ್ರಭಾವಿಗಳಿಗೆ ಸಂಚಿಕೆ ಮಾಡಿದ್ದಾರೆ. ಬಿ. ಖರಾಬ್ ಬಂಡೆಗೆ ಬಿಬಿಎಂಪಿ ಕೋಟಿ ಕೋಟಿ ಹಣ ಸುರಿದಿದೆ ಎಂದು ಆರೋಪ ಮಾಡಿದ್ದಾರೆ.







