ಮೀನುಗಾರಿಕಾ ಅಭಿವೃದ್ಧಿಗೆ ಕೇಂದ್ರದಿಂದ ಗರಿಷ್ಠ ಹಣ ಬಿಡುಗಡೆಯ ನಿರೀಕ್ಷೆ: ಸಚಿವ ಕೋಟಾ
ಮಂಗಳೂರು, ಆ. 29: ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಗರಿಷ್ಠ ಪ್ರಮಾಣದ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಮೀನುಗಾರಿಕಾ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಇಂದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಪಂಜರ ಮೀನು ಕೃಷಿ ಕೈಗೊಳ್ಳುವ ಬಗ್ಗೆ ಮೀನುಗಾರಿಕಾ ಇಲಾಖೆ ಆಶ್ರಯ ದಲ್ಲಿ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀನುಗಾರರ ಆದಾಯ ದ್ವಿಗುಣ ಗೊಳಿಸುವುದು ರಾಜ್ಯ ಸರಕಾರದ ಪ್ರಮುಖ ಗುರಿ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಸಿಹಿ ನೀರಿನ ಸಿಗಡಿ ಕೃಷಿಗೆ ಮೀನುಗಾರಿಕಾ ಇಲಾಖೆಯಿಂದ ಆದ್ಯತೆ ನೀಡಲಾಗುವುದು. ಕಡಲ ಮೀನುಗಾರಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅದೇ ರೀತಿ ಒಳನಾಡು ಮೀನುಗಾರಿಕೆಯಲ್ಲಿ 9ನೇ ಸ್ಥಾನದಲ್ಲಿದೆ. ಮೀನು ಉತ್ಪಾದನೆಯಲ್ಲಿ ದೇಶ ದಲ್ಲೇ ಪ್ರಥಮ ಸ್ಥಾನ ನಮ್ಮ ಗುರಿಯಾಗಿದೆ ಎಂದರು.
ಕಡಲಿನಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕಡ್ಡಾಯವಾಗಿ ಲ್ೈ ಜಾಕೆಟ್ ಅಗತ್ಯವಿದೆ. ಮೀನುಗಾರರ ಸಂರಕ್ಷಣೆ ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮೀನುಗಾರಿಕೆ ನಿರ್ದೇಶಕ ರಾಮಾಚಾರ್ಯ ಅವರು ಪ್ರಾಸ್ತಾವಿಕ ಮಾತನಾಡಿ, ಕಡಲ ಮೀನುಗಾರಿಕೆಯಲ್ಲಿ ಕರಾವಳಿ ಭಾಗದಿಂದ 4 ಲಕ್ಷ ಟನ್ ಮೀನು ಉತ್ಪಾದನೆಯಾಗುತ್ತದೆ. ಪಂಜರ ಮೀನು ಕೃಷಿಗೆ ಮಾಡಲು ಸಾರ್ವಜನಿಕರು ಮುಂದೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆ ಕಾರ್ಯಕ್ರಮಗಳ ಕೈಪಿಡಿ, ಪಂಜರ ಕೃಷಿ ಬಗ್ಗೆ ಕರಪತ್ರವನ್ನು ಅತಿಥಿಗಳು ಬಿಡುಗಡೆ ಮಾಡಿದರು. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಪ್ರಮಾಣ ಪತ್ರ ವಿತರಿಸಲಾಯಿತು. ಮೀನು ಮರಿ ವಿತರಣೆ ನಡೆಯಿತು.
ಮೀನುಗಾರಿಕೆಗೆ ತೆರಳಿದ ಸಮಯ ಸೋಮೇಶ್ವರ ಕಡಲ ತೀರದಲ್ಲಿ ಮೃತಪಟ್ಟಿದ್ದ ನಾರಾಯಣ ಉಚ್ಚಿಲ್ ಅವರ ಪರವಾಗಿ ಅವರ ಪುತ್ರಿ ರಂಜಿತಾ ಅವರಿಗೆ ರಾಜ್ಯ ಸರಕಾರದಿಂದ 3 ಲಕ್ಷ ರೂ. ಪರಿಹಾರಧನದ ಚೆಕ್ ಅನ್ನು ಸಚಿವರು ವಿತರಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಪಂಜರ ಮೀನು ಕೃಷಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯ ಮಂಡನೆ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ದ.ಕ. ಜಿ.ಪಂ. ಅಧ್ಯಕ್ಷೆ ಕಸ್ತೂರಿ ಪಂಜ, ಉಪಾಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಿ. ಪಾಶ್ವನಾಥ್ ಇದ್ದರು.
ಸೆ.1 ರಿಂದ ಮೀನುಗಾರಿಕೆ ಆರಂಭ
ರಾಜ್ಯ ಕರಾವಳಿಯಲ್ಲಿ ಸೆ.1 ರಿಂದ ಮೀನುಗಾರಿಕೆ ಆರಂಭವಾಗಲಿದೆ. ಸಾಮಾನ್ಯವಾಗಿ ಆ.1ರಂದು ಮೀನುಗಾರಿಕೆ ಆರಂಭವಾಗುತ್ತದೆ. ಕೊರೊನಾ ಕಾರಣದಿಂದಾಗಿ ಈ ಬಾರಿ ಒಂದು ತಿಂಗಳು ತಡವಾಗಿ ಆರಂಭವಾಗುತ್ತಿದೆ. ಮೀನುಗಾರಿೆಗೆ ಈಗಾಗಲೇ ತಯಾರಿ ನಡೆಯುತ್ತಿದೆ. ಆರೋಗ್ಯ ಮತ್ತು ಕೊರೊನಾ ನಿಯಮಾವಳಿ ಪಾಲನೆ ಮಾಡಿಕೊಂಡು ಸೆ.1ರಿಂದ ಮೀನುಗಾರಿಕೆ ನಡೆಸಲಾಗುವುದು ಎಂದು ಸಚಿವ ಕೋಟ ತಿಳಿಸಿದ್ದಾರೆ.
ಪಂಜರ ಮೀನು ಕೃಷಿಯಿಂದ 10,000 ಮಂದಿಗೆ ಉದ್ಯೋಗ
ಪಂಜರ ಮೀನು ಕೃಷಿ ಮೂಲಕ ರಾಜ್ಯದ ಹತ್ತು ಸಾವಿರ ಮಂದಿಗೆ ಸ್ವಾವಲಂಭಿ ಉದ್ಯೋಗ ಸೃಷ್ಟಿಸುವು ನಮ್ಮ ಗುರಿ. ಪಂಜರ ಮೀನು ಕೃಷಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ 100 ತರಬೇತಿ ಕಾರ್ಯಾಗಾರ ಆಯೋಜಿಸಲಾಗು ವುದು. ಪಂಜರ ಮೀನು ಕೃಷಿ ಪೂರ್ವಭಾವಿ ಸಿದ್ಧತೆಗೆಂದು ಕಿಸಾನ್ ಕಾರ್ಡ್ ಮೂಲಕ ಬ್ಯಾಂಕ್ನಿಂದ 3 ಲಕ್ಷ ರೂ.ವರೆಗೆ ಸಾಲ ಒದಗಿಸಲಾ ಗುತ್ತದೆ. ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಮುಖ್ಯಸ್ಥರ ಜೊತೆ ಈಗಾಗಲೇ ಚರ್ಚೆ ನಡೆಸಿದ್ದೇವೆ.
ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಮೀನುಗಾರಿಕೆ, ಕರ್ನಾಟಕ ಸರಕಾರ.