ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಕೋರ್ಟ್ ನಿರ್ಮಾಣ: ವೇದವ್ಯಾಸ ಕಾಮತ್
ಮಂಗಳೂರು, ಆ.29: ಸ್ಮಾರ್ಟ್ ಸಿಟಿ ಯೋಜನೆಯಡಿ ಉರ್ವ ಮಾರುಕಟ್ಟೆ ಬಳಿ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಹಾಗು ಶಟ್ಲ್ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಆಗಲಿದ್ದು, ಶೀಘ್ರದಲ್ಲೇ ಗುದ್ದಲಿ ಪೂಜೆ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗು ನೆಹರೂ ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಾಕಿ ಮಾಂತ್ರಿಕ ಧ್ಯಾನ್ಚಂದ್ ಅವರ ಸ್ಮರಣೆಗಾಗಿ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮೈದಾನಗಳಲ್ಲಿ ಕ್ರೀಡಾ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದು ದೇಶದ ಪ್ರಗತಿಗೆ ಅಪಾಯಕಾರಿ. ಕ್ರೀಡಾ ಚಟುವಟಿಕೆಗಳು ಚುರುಕುಗೊಳ್ಳುವ ಉದ್ದೇಶದಿಂದ ಯುವಕ ಸಂಘಗಳಿಗೆ ಕ್ರೀಡಾ ಸಲಕರಣೆಗಳನ್ನು ವಿತರಿಸಲಾಗಿದೆ. ಅದರ ಸದ್ಭಳಕೆ ಮಾಡಬೇಕು ಎಂದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕೇವಲ ಕ್ರೀಡಾಪಟುವಾಗದೆ ದೇಶಭಕ್ತಿಯನ್ನು ಹೊಂದಿದ್ದ ಆದರ್ಶ ವ್ಯಕ್ತಿಯಾಗಿದ್ದರು ಎಂದರು.
ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಸದಸ್ಯ ಜನಾರ್ದನ ಗೌಡ, ಅಂ.ರಾ.ವಾಲಿಬಾಲ್ ಕೋಚ್ ನಾರಾಯಣ ಆಳ್ವ ಮುಖ್ಯ ಅತಿಥಿಯಾಗಿದ್ದರು. ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ನೆಹರೂ ಯುವ ಕೇಂದ್ರದ ಸಮನ್ವಯ ಕಾರ ರಘುವೀರ್ ಸೂಟರ್ಪೇಟೆ, ನಿವೃತ್ತ ದೈಹಿಕ ಶಿಕ್ಷಕರಾದ ಡಾ.ಸುರೇಶ್ ಶೆಟ್ಟಿ ಹಾಗು ಸೇವಂತಿ ಅವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಅವರ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭ ಯುವ ಚೈತನ್ಯ ಯೋಜನೆಯಡಿ ಯುವ ಕ್ರೀಡಾ ಸಂಘಗಳಿಗೆ ಕ್ರೀಡಾ ಸಲಕರಣೆ ಹಾಗು ಫಿಟ್ ಇಂಡಿಯಾ ಪ್ರಮಾಣ ಪತ್ರ ವಿತರಿಸಲಾಯಿತು.