ಜೆಇಇ, ನೀಟ್ ಪರೀಕ್ಷೆ ಮುಂದೂಡಲು ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹ
ಉಡುಪಿ, ಆ.29: ಕೇಂದ್ರ ಸರಕಾರ ಸೆ.1ರಿಂದ ನಡೆಸಲು ನಿರ್ಧರಿಸಿರುವ ರಾಷ್ಟ್ರೀಯ ಮಟ್ಟದ ಜೆಇಇ ಹಾಗೂ ನೀಟ್ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಜಿಲ್ಲಾಧ್ಯಕ್ಷ ಅಶೋಕ್ಕುಮಾರ್ ಕೊಡವೂರು ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಡುಪಿ ಜಿಲ್ಲಾಧಿಕಾರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿತು.
ಇಡೀ ದೇಶದಲ್ಲಿ ಕೋವಿಡ್-19 ಸಾಂಕ್ರಮಿಕ ರೋಗ ತಾಂಡವವಾಡುತ್ತಿರುವ ವೇಳೆ ಕೇಂದ್ರ ಸರಕಾರ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದು ಮೂರ್ಖತನದ ನಿರ್ಧಾರವಾಗಿದೆ. ಸಾಂಕ್ರಾಮಿಕ ರೋಗ ಹರಡುವಾಗ ವಿದ್ಯಾರ್ಥಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿ ಸುವುದು ಕೂಡಾ ವಾಹನಗಳ ಅಲಭ್ಯತೆಯಿಂದ ಕಷ್ಟಸಾಧ್ಯ. ಅಲ್ಲದೆ ವಸತಿ ಸೌಕರ್ಯ ಲಭ್ಯವಾಗುವುದು ಕಷ್ಟ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳ ವರ್ಚುವಲ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಎಲ್ಲಾ ಮುಖ್ಯಮಂತ್ರಿಗಳು ಇದಕ್ಕೆ ವಿರೋಧ ಸೂಚಿಸಿದ್ದಾರೆ ಮತ್ತು ಕೇಂದ್ರ ಸರಕಾರ ಈ ಪರೀಕ್ಷೆಗಳನ್ನು ಮಾಡುವ ನಡೆಯನ್ನು ವಿರೋಧಿಸಿ ದ್ದಾರೆ. ಅವರು ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಹ ಕೇಂದ್ರ ಸರಕಾರದ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ದಿನೇಶ್ ಪುತ್ರನ್, ವೆರೋನಿಕಾ ಕರ್ನೇಲಿಯೋ, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಹರೀಶ್ ಕಿಣಿ, ಕೆ. ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಗೀತಾ ವಾಗ್ಳೆ, ವಿಶ್ವಾಸ್ ಅಮೀನ್, ಯತೀಶ್ ಕರ್ಕೇರಾ, ಜನಾರ್ದನ ಭಂಡಾರ್ಕಾರ್, ನಿತ್ಯಾನಂದ ಕೆಮ್ಮಣ್ಣು, ರಮೇಶ್ ಕಾಂಚನ್, ಪ್ರಶಾಂತ್ ಜತ್ತನ್ನ, ಉಪೇಂದ್ರ ಮೆಂಡನ್, ನಾರಾಯಣ ಕುಂದರ್, ಗಣೇಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.