ಮಂಗಳೂರು: ಗಾಂಜಾ ಸಾಗಾಟ ಜಾಲದ ಇಬ್ಬರ ಸೆರೆ; ವಾಹನಗಳು ವಶಕ್ಕೆ
ಮಂಗಳೂರು, ಆ.29: ನಗರ ಮತ್ತು ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ಪಿಕಪ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಶನಿವಾರ ಪಂಪ್ವೆಲ್ ಸಮೀಪದ ತಾರೆತೋಟ ಎಂಬಲ್ಲಿ ಬಂಧಿಸಿ ಗಾಂಜಾ ಸಹಿತ ಪಿಕಪ್ ವಾಹನ ಮತ್ತು ಆರೋಪಿಗೆ ಬೆಂಗಾವಲು ನೀಡುತ್ತಿದ್ದ ಕಾರನ್ನೂ ಕೂಡ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಜೇಶ್ವರ ಸಮೀಪದ ವರ್ಕಾಡಿ-ಪಾವೂರಿನ ಕಲಂದರ್ ಶಾಹ್ (35)ಮತ್ತು ಉದ್ಯಾವರ ಕುಂಜತ್ತೂರಿನ ಮೊಯ್ದಿನ್ ಅನ್ಸಾರ್ (27)ಎಂದು ಗುರುತಿಸಲಾಗಿದೆ. ಅಲ್ಲದೆ 132 ಕೆಜಿ ಗಾಂಜಾ ಮತ್ತು ಎರಡು ಮೊಬೈಲ್, ಹಾಗೂ ಪಿಕಪ್, ಸ್ವಿಫ್ಟ್ ಕಾರನ್ನು ವಶ ಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 43 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಆರೋಪಿಗಳು ಮಂಗಳೂರು ಮತ್ತು ಕೇರಳಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನವಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಜಗದೀಶ್ ಅವರ ಮಾರ್ಗ ದರ್ಶನದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್, ಇಎನ್ಸಿಪಿಎಸ್ ಇನ್ಸ್ಪೆಕ್ಟರ್ ರಾಮಕೃಷ್ಣ, ಎಸ್ಸೈಗಳಾದ ಕಬ್ಬಳ್ರಾಜ್, ಪ್ರದೀಪ್ ಟಿ.ಆರ್., ಎಎಸ್ಸೈಗಳಾದ ಮೋಹನ್ ಎಲ್, ಮೋಹನ್ ಕೆವಿ, ತೇಜಕುಮಾರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸಾರ್ವಜನಿಕರಿಗೆ ಸೂಚನೆ: ನಗರದಲ್ಲಿ ಗಾಂಜಾ ಸಾಗಾಟ ಅಥವಾ ಇನ್ನಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಉಪ ಪೊಲೀಸ್ ಆಯುಕ್ತರಾದ ಅರುಣಾಂಶುಗಿರಿ, ವಿನಯ್ ಗಾಂವ್ಕರ್ ಅಥವಾ ಪೊಲೀಸ್ ಕಂಟ್ರೋಲ್ಗೆ ಮಾಹಿತಿ (0842-2220800) ನೀಡುವಂತೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.