ಬೈಕಂಪಾಡಿ ಎಪಿಎಂಸಿಯಲ್ಲಿ ಹೈಟೆಕ್ ಸೌಲಭ್ಯ: ಜಿಲ್ಲಾಧಿಕಾರಿ ಡಾ. ರಾಜೇಂದ್ರ
ಮಂಗಳೂರು, ಆ. 29: ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಿ ಪರಿಪೂರ್ಣ ಮಾರುಕಟ್ಟೆ ಯನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಬೈಕಂಪಾಡಿಯ ಎಪಿಎಂಸಿ ಪ್ರಾಂಗಣದಲ್ಲಿ ಶನಿವಾರ ನಡೆದ ವರ್ತಕರ ಹಾಗೂ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಪಿಎಂಸಿ ಪ್ರಾಂಗಣದಲ್ಲಿ ಈಗಾಗಲೇ ಸಮಿತಿಯ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋಲ್ಡ್ ಸ್ಟೋರೇಜ್, ಹಣ್ಣುಗಳನ್ನು ಶೇಖರಿಸಿಡುವ ಗೋದಾಮು ಸೇರಿದಂತೆ ಹಣ್ಣು, ತರಕಾರಿ ವ್ಯವಹಾರಕ್ಕೆ ಪೂರಕವಾದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ಕೈಗೊಳ್ಳಬೇಕಾದ ತುರ್ತು ಹಾಗೂ ಮೂಲಸೌಕರ್ಯ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಜತೆಗೂಡಿ, ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಸ್ಮಾರ್ಟ್ ಸಿಟಿ, ನಗರಾಭಿವೃದ್ಧಿ ಪ್ರಾಧಿಕಾರ, ಕೇಂದ್ರ ತೋಟಗಾರಿಕಾ ಮಿಷನ್ ಸಹಿತ ವಿವಿಧ ಇಲಾಖೆಗಳ ಅನುದಾನದಿಂದ ಎಪಿಎಂಸಿ ಪ್ರಾಂಗಣದಲ್ಲಿ ಉನ್ನತ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಮಂಗಳೂರಿನ ಎಲ್ಲಾ ರೀತಿಯ ಹೋಲ್ಸೇಲ್ ವ್ಯಾಪಾರಗಳನ್ನು ಎಪಿಎಂಸಿ ಪ್ರಾಂಗಣಕ್ಕೆ ತರಲಾಗುವುದು ಎಂದರು.
ಕೇಂದ್ರ ಮಾರುಕಟ್ಟೆ ವ್ಯಾಪಾರಿಗಳಿಗೆ ಆದ್ಯತೆ: ಕೇಂದ್ರ ಮಾರುಕಟ್ಟೆಯಿಂದ ಸ್ಥಳಾಂತರಗೊಂಡ 44 ಪರವಾನಿಗೆದಾರರಿಗೆ ಮಳಿಗೆ ಹಂಚಿಕೆಯಲ್ಲಿ ಆದ್ಯತೆ ನೀಡಲಾಗಿದೆ. ಇವರ ಬೇಡಿಕೆಗಳಿಗೆ ಎಪಿಎಂಸಿ ಸೂಕ್ತವಾಗಿ ಸ್ಪಂದಿಸುತ್ತಿದೆ. ಯಾವುದೇ ವ್ಯವಹಾರಗಳಿಗೆ ತೊಂದರೆ ಕೊಡುವುದು ಜಿಲ್ಲಾಡಳಿತದ ಉದ್ದೇಶವಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದರು.
ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಲಾಗುವುದು. ಸ್ಥಳಾಂತರ ನಂತರ ಎಪಿಎಂಸಿ ಪ್ರಾಂಗಣದಲ್ಲಿ ಈಗಾಗಲೇ 1 ಕೋ.ರೂ.ಗೂ ಅಧಿಕ ಮೊತ್ತದ ಮೂಲ ಸೌಕರ್ಯದ ಕಾಮಗಾರಿ ನಡೆಸಲಾಗಿದೆ. ಟ್ರಾಫಿಕ್ ಪೊಲೀಸ್ ಮಾಹಿತಿ ಯಂತೆ ಕೇಂದ್ರ ಮಾರುಕಟ್ಟೆಗೆ ಪ್ರತೀ ದಿನ 1000ಕ್ಕೂ ಮಿಕ್ಕಿ ವಾಹನಗಳು ಬರುತ್ತಿದ್ದು, ಮಾರುಕಟ್ಟೆ ಸ್ಥಳಾಂತರದ ನಂತರ ನಗರದಲ್ಲಿ ವಾಹನ ಸಂಚಾರ ಸಮಸ್ಯೆ ಗಣನೀಯವಾಗಿ ತಗ್ಗಿದೆ ಎಂದರು.
ಕ್ರಮಕ್ಕೆ ಸೂಚನೆ : ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ತಮ್ಮಿಚ್ಚೆಯ ಸ್ಥಳದಲ್ಲಿ ಮಾರಾಟ ಮಾಡಲು ಅವಕಾಶ ನೀಡುತ್ತದೆಯೇ ಹೊರತು, ಮಾರಾಟಗಾರರಿಗೆ ಎಪಿಎಂಸಿ ಪ್ರಾಂಗಣದ ಹೊರಗಡೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿಲ್ಲ. ವರ್ತಕರಿಗೆ ಎಪಿಎಂಸಿ ಕಾಯ್ದೆಯೇ ಅನ್ವಯವಾಗುತ್ತದೆ. ಅಧಿಸೂಚಿತ ಪ್ರದೇಶದ ಹೊರಗಡೆ ರಖಂ ವ್ಯಾಪಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ರಿಟೇಲ್ ಲೈಸನ್ಸ್ ಲ್ಲಿ ಹೋಲ್ಸೇಲ್ ವ್ಯಾಪಾರ ಮಾಡಿದರೆ ಕಠಿಣ ಕ್ರಮ
ಮುಂದಿನ ದಿನಗಳಲ್ಲಿ ಯಾವುದೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಿದ್ದರೆ ಎಪಿಎಂಸಿ ಪರವಾನಿಗೆ ಪಡೆದ ನಂತರವೇ ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕೆಲವು ವ್ಯಾಪಾರಿಗಳು ರಿಟೇಲ್ ವ್ಯಾಪಾರಕ್ಕೆ ಪರವಾನಿಗೆ ಪಡೆದು ಹೋಲ್ಸೇಲ್ ವ್ಯವಹಾರ ಮಾಡುತ್ತಿರುವ ಮಾಹಿತಿ ಇದೆ. ಅಂತಹ ವ್ಯಾಪಾರಿ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದರು. ನಗರದಲ್ಲಿ ಇಂತಹ ವ್ಯಾಪಾರ ಮಾಡುತ್ತಿರುವವರನ್ನು ಮಹಾನಗರಪಾಲಿಕೆ ಅಧಿಕಾರಿಗಳು ಪತ್ತೆ ಹಚ್ಚಬೇಕು. ಇದಕ್ಕಾಗಿ ವಿಚಕ್ಷಣಾ ತಂಡವನ್ನು ರಚಿಸುವಂತೆ ಮನಪಾ ಆಯುಕ್ತರಿಗೆ ನಿರ್ದೇಶಿಸಿದರು.
ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಮಾತನಾಡಿ, ಎಪಿಎಂಸಿ ಪ್ರಾಂಗಣದಲ್ಲಿ 10 ವರ್ಷಗಳ ಕಾಲ ನಿಯಮಾನುಸಾರ ವ್ಯಾಪಾರ ಮಾಡಿದವರಿಗೆ ಮಳಿಗೆಗಳನ್ನು ಮಾಲಕತ್ವದಲ್ಲಿ ನೀಡಲಾಗುವುದು. ವರ್ತಕರ ಎಲ್ಲಾ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮೇಯರ್ ದಿವಾಕರ್ ಪಾಂಡೇಶ್ವರ, ಉಪಮೇಯರ್ ವೇದಾವತಿ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಮುಡಾ ಆಯುಕ್ತ ದಿನೇಶ್ ಕುಮಾರ್, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್, ಎಪಿಎಂಸಿ ವರ್ತಕರ ಸಂಘದ ಮುಖಂಡರಾದ ಭರತ್ರಾಜ್, ಬಿ.ಕೆ. ಇಮ್ತಿಯಾಝ್ ಉಪಸ್ಥಿತರಿದ್ದರು.