ದಿಲ್ಲಿ ಹಿಂಸಾಚಾರದ ತನಿಖಾಧಿಕಾರಿ ಕಾನೂನು ಘಟಕಕ್ಕೆ ವರ್ಗಾವಣೆ
ಹೊಸದಿಲ್ಲಿ, ಆ. 29: ಈಶಾನ್ಯ ದಿಲ್ಲಿಯ ಹಿಂಸಾಚಾರದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ)ದ ಮುಖ್ಯಸ್ಥರಾಗಿದ್ದ ದಿಲ್ಲಿ ಪೊಲೀಸ್ ಅಧಿಕಾರಿಯೋರ್ವರನ್ನು ಶುಕ್ರವಾರ ಕಾನೂನು ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಉಪ ಆಯುಕ್ತ (ಕ್ರೈಮ್ ಬ್ರಾಂಚ್) ರಾಜೇಶ್ ಡಿಯೋ ಅವರನ್ನು ಕಾನೂನು ಘಟಕದ ಪೊಲೀಸ್ ಉಪ ಆಯುಕ್ತ (ಡಿಸಿಪಿ)ರ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಈ ಹಿಂದೆ ಅವರು ಕಾನೂನು ಘಟಕದ ಹೆಚ್ಚುವರಿ ಉಸ್ತುವಾರಿ ನಿರ್ವಹಿಸುತ್ತಿದ್ದರು.
ಕಳೆದ ಫೆಬ್ರವರಿಯಲ್ಲಿ ಹೊಸದಿಲ್ಲಿಯ ಈಶಾನ್ಯ ಭಾಗದಲ್ಲಿ ಕೋಮ ಹಿಂಸಾಚಾರ ನಡೆದಿತ್ತು. ಈ ಕೋಮು ಹಿಂಸಾಚಾರದಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದರು ಹಾಗೂ ಹಲವು ಮಂದಿ ಗಾಯಗೊಂಡಿದ್ದರು. ರಾಜೇಶ್ ದೇವ ಅವರೊಂದಿಗೆ ಪೊಲೀಸ್ ಉಪ ಆಯುಕ್ತ (ಕ್ರೈಮ್) ಆಗಿರುವ ರಾಮ್ ಗೋಪಾಲ್ ನಾಯಕ್ ಅವರನ್ನು ಕೂಡ ಟ್ರಾಫಿಕ್ ಡಿಸಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಮೋನಿಕಾ ಭಾರದ್ವಾಜ್ ಹೊರಡಿಸಿದ ಆದೇಶದ ಪ್ರಕಾರ, ಪೊಲೀಸ್ ಉಪ ಆಯುಕ್ತ (ಉತ್ತರ)ರನ್ನು ಡಿಸಿಪಿ (ಕ್ರೈಮ್) ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಪೊಲೀಸ್ ಉಪ ಆಯುಕ್ತ (ದ್ವಾರಕಾ) ಆ್ಯಂಟೊ ಅಲ್ಫೋನ್ಸೆ ಅವರನ್ನು ಉತ್ತರ ಜಿಲ್ಲೆಗೆ ವರ್ಗಾಯಿಸಲಾಗಿದೆ.