ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ಸ್ಥಗಿತಕ್ಕೆ ಆಗ್ರಹಿಸಿ ಧರಣಿ
ಬೆಂಗಳೂರು, ಆ. 30: ಕಬ್ಬನ್ ಪಾರ್ಕ್ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಪಾರ್ಕ್ ಅಸೋಸಿಯೇಷನ್ ವತಿಯಿಂದ ಕಬ್ಬನ್ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಯಿತು.
ರವಿವಾರ ಪಾರ್ಕಿನ ಕೇಂದ್ರ ಗ್ರಂಥಾಲಯ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಸರಕಾರಿ ರಜಾ ದಿನಗಳಂದು ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು. ಜೊತೆಗೆ ಪ್ರತಿದಿನ ರಾತ್ರಿ 10 ರಿಂದ ಬೆಳಗ್ಗೆ 8ರ ವರೆಗೆ ವಾಹನ ಸಂಚಾರ ನಿಷೇಧ ಮಾಡಲಾಗುತ್ತಿತ್ತು. ಪ್ರತಿದಿನ ನಾಲ್ಕರಿಂದ ಐದು ಸಾವಿರ ಜನ ಇಲ್ಲಿಗೆ ಬರುತ್ತಾರೆ. ಇಂಥ ಸ್ಥಳವನ್ನು ಪರಿಸರ ಸ್ನೇಹಿಯಾಗಿ ಮಾಡಬೇಕೆಂದು ಘೋಷಣೆ ಕೂಗಿದರು.
ಇದೀಗ ರಾಜ್ಯ ಸರಕಾರ ರವಿವಾರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಿದೆ ಎಂದು ಆರೋಪಿಸಿದ ಪಾರ್ಕ್ ಅಸೋಸಿಯೇಷನ್ ಸದಸ್ಯರು, ನಗರದೆಲ್ಲೆಡೆ ವಾಹನಗಳಿಂದ ಸಾಕಷ್ಟು ಮಾಲಿನ್ಯವಾಗಿದೆ. ಇದೀಗ ಕಬ್ಬನ್ ಪಾರ್ಕ್ ಕೂಡ ಮಾಲಿನ್ಯದಿಂದ ಹಾಳಾಗಬಾರದು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ವಸಂತ್ ಕುಮಾರ್, ಸಾಮಾಜಿಕ ಹೋರಾಟಗಾರ ರವಿಕೃಷ್ಣಾರೆಡ್ಡಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.