ಗುರಿ ಸಾಧಿಸುವ ಛಲದಿಂದ ಯಶಸ್ಸು: ಡಾ.ಸಯ್ಯದ್ ಅಮೀನ್ ಅಹ್ಮದ್
ಪಡುಬಿದ್ರೆಯಲ್ಲಿ ಮಾಹಿತಿ ಕಾರ್ಯಾಗಾರ
ಪಡುಬಿದ್ರೆ, ಆ.30: ಗುರಿ ಸಾಧಿಸುವ ಛಲ ಇದ್ದರೆ, ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಮಂಗಳೂರು ಪಿಎ ಕಾಲೇಜಿನ ಮ್ಯಾನೇಜ್ಮೆಂಟ್ ಆ್ಯಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಸಯ್ಯದ್ ಅಮೀನ್ ಅಹ್ಮದ್ ಹೇಳಿದ್ದಾರೆ.
ಪಡುಬಿದ್ರೆ ಯೂತ್ ಫೌಂಡೇಶನ್ ಮತ್ತು ಇನ್ಫೋಮೇಟ್ ಫೌಂಡೇಶನ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪಡುಬಿದ್ರೆ ಸಾಯಿ ಆರ್ಕೆಡ್ನಲ್ಲಿ ರವಿವಾರ ಆಯೋಜಿಸಿದ್ದ ‘ಸರಕಾರಿ ಉದ್ಯೋಗಾವಕಾಶಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ’ ಮಾಹಿತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನಾವು ಯಾವ ವಿದ್ಯೆಯಲ್ಲಿ ಪರಿಣತಿಯನ್ನು ಪಡೆದಿದ್ದೇವೆಯೋ, ಅದನ್ನೇ ಮುಂದುವರಿಸಬೇಕು. ಹಲವಾರು ಮಂದಿ ಪದವಿ ಪಡೆದವರೂ, ಸರಕಾರಿ ಹುದ್ದೆ ಪಡೆಯಲು ಅನರ್ಹರಾಗಿರುತ್ತಾರೆ. ಸಂದರ್ಶನ ಸಮಯದಲ್ಲೂ ವಿಫಲರಾಗಿ ಸೋಲೊಪ್ಪಿಕೊಳ್ಳುತ್ತಾರೆ. ಇದಕ್ಕೆ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು, ಮಾನಸಿಕವಾಗಿ ಸದೃಢವಾಗಬೇಕು ಎಂದು ಕಿವಿಮಾತು ಹೇಳಿದರು.
ಉಡುಪಿ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಪಡುಬಿದ್ರೆ ಯೂತ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಹಸನ್ ಪಡುಬಿದ್ರೆ, ಇನ್ಫೋಮೇಟ್ ಫೌಂಡೇಶನ್ ನಿರ್ದೇಶಕ ಅಬ್ದುಲ್ ಖಾದರ್, ಕೋಶಾಧಿಕಾರಿ ರಮೀಝ್, ಉಪಾಧ್ಯಕ್ಷ ಕೌಸರ್ ಪಡುಬಿದ್ರೆ, ಮಯ್ಯದ್ದಿ ಮಜಲಕೋಡಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ನಿಯಾಝ್ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ವಂದಿಸಿದರು.