ಮಣಿಪಾಲ: ಉದ್ಯಮಶೀಲತಾಭಿವೃದ್ಧಿ ತರಬೇತಿ ಸಮಾರೋಪ

ಮಣಿಪಾಲ, ಆ.31: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ ಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಆರು ದಿನಗಳ ಕಾಲ ನಡೆದ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ ಇಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ತರಬೇತಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿದ ಧಾರವಾಡ ಸಿಡಾಕ್ನ ಜಂಟಿ ನಿರ್ದೇಶಕ ಅರವಿಂದ ಬಾಳೇರಿ, ಈ ತರಬೇತಿ ತಮ್ಮಲ್ಲಿ ಜೀವನದ ಗುರಿಯ ಬಗ್ಗೆ ಸ್ಪಷ್ಟತೆಯನ್ನು ನೀಡಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿ ದರು.
ಮಣಿಪಾಲ ಬಿವಿಟಿಯ ಮುಖ್ಯ ಅಧಿಕಾರಿ ಮನೋಹರ ಕಟ್ಗೇರಿ ಮಾತನಾಡಿ, ತಮ್ಮಲ್ಲಿ ಸುಸಂಕಲ್ಪ ಮತ್ತು ಕ್ರಿಯಾಶೀಲತೆ ಇದ್ದಲ್ಲಿ ಕೈಗೊಂಡ ಉದ್ಯಮದಲ್ಲಿ ಸಫಲತೆಯನ್ನು ಕಾಣಬಹುದು ಎಂದು ಹೇಳಿದರು. ಬಿವಿಟಿಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಮಾತನಾಡಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.
ಶಿಬಿರಾರ್ಥಿಗಳು ಆರು ದಿನಗಳ ತರಬೇತಿಯ ಕುರಿತು ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.







