2017ರ ಜೂ.18ಕ್ಕೆ ಉಡುಪಿಗೆ ಬಂದಿದ್ದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ
ಉಡುಪಿ, ಆ.31: ಇಂದು ನಿಧನರಾದ ದೇಶದ 13ನೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತನ್ನ ಹುದ್ದೆಯಿಂದ ನಿರ್ಗಮಿಸುವುದಕ್ಕೆ ಒಂದು ತಿಂಗಳ ಮೊದಲು ಉಡುಪಿಗೆ ಮೊದಲ ಸಲ ಆಗಮಿಸಿದ್ದು, ಒಂದು ದಿನದ ಈ ಭೇಟಿಯ ವೇಳೆ ಉಡುಪಿ ಶ್ರೀಕೃಷ್ಣ ಮಠ ಹಾಗೂ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನವನ್ನು ಪಡೆದಿದ್ದರು.
2017ರ ಜೂ.18ರಂದು ಅವರ ಪ್ರಮುಖ ಕಾರ್ಯಕ್ರಮ ಡಾ.ಬಿ. ಆರ್. ಶೆಟ್ಟಿ ನಿರ್ಮಾಣದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸುವುದಾಗಿತ್ತು. ಅಂದು ಬೆಳಗ್ಗೆ 11ಕ್ಕೆ ಐಎಎಫ್ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, 11:25ಕ್ಕೆ ಐಎಎಫ್ ಹೆಲಿಕಾಪ್ಟರ್ನಲ್ಲಿ ಆದಿಉಡುಪಿ ಹೆಲಿಪ್ಯಾಡ್ಗೆ ಆಗಮಿಸಿದ್ದರು. ಅಪರಾಹ್ನ 12 ಕ್ಕೆ ಶ್ರೀಕೃಷ್ಣ ಮಠಕ್ಕೆ ತೆರಳಿ ಕೃಷ್ಣದರ್ಶನದ ಬಳಿಕ ಆಗ ದಾಖಲೆಯ ಐದನೇ ಪರ್ಯಾಯದಲ್ಲಿದ್ದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಅಲ್ಲೇ ಅವರು ಅಷ್ಟಮಠಗಳ ಉಳಿದ ಮಠಾಧೀಶರನ್ನು ಸಹ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಶ್ರೀಗಳ ಪರವಾಗಿ ರಾಷ್ಟ್ರಪತಿಗಳನ್ನು ಅಲ್ಲಿ ಸನ್ಮಾನಿಸಲಾಗಿತ್ತು.
ಬಳಿಕ ಪ್ರಣಬ್ ಮುಖರ್ಜಿ ಅವರು 12:45ಕ್ಕೆ ರಾಜಾಂಗಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು. ಅಪರಾಹ್ನ 1:30ಕ್ಕೆ ರಾಜಾಂಗಣದಿಂದ ಹೊರಟು ಸರಕಾರಿ ಪ್ರವಾಸಿ ಮಂದಿರಕ್ಕೆ ಬಂದ ಅವರು 2:25ಕ್ಕೆ ಉಡುಪಿ ಪ್ರವಾಸಿ ಮಂದಿರದಿಂದ ಕೊಲ್ಲೂರಿಗೆ ತೆರಳಿದ್ದರು. 3:40ರಿಂದ ಸಂಜೆ 4:10ರವರೆಗೆ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಾಷ್ಟ್ರಪತಿಗಳು, ಅಲ್ಲಿಂದ ಹೊರಟು ರಸ್ತೆ ಮಾರ್ಗವಾಗಿ ಉಡುಪಿಗೆ ಆಗಮಿಸಿ 5:30ಕ್ಕೆ ಆದಿಉಡುಪಿ ಹೆಲಿಪ್ಯಾಡ್ನಿಂದ ಮಂಗಳೂರಿಗೆ ನಿರ್ಗಮಿಸಿದ್ದರು.
ಹೀಗೆ ಒಂದು ದಿನದ ಬಿಡುವಿರದ ಕಾರ್ಯಕ್ರಮಗಳ ನಡುವೆ ರಾಜಾಂಗಣದಲ್ಲಿ ನೆರೆದ ಜನರನ್ನುದ್ದೇಶಿಸಿ ಮಾತನಾಡಿದ್ದ ಅವರು ವೈದ್ಯಕೀಯ ಕ್ಷೇತ್ರದ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಲ್ಲದೇ, ವೈದ್ಯರ ಮೇಲೆ ದೇಶದ ನಾನಾ ಕಡೆಗಳಲ್ಲಿ ಆಗುತಿದ್ದ ಹಲ್ಲೆಯನ್ನು ಖಂಡಿಸಿದ್ದರು. ಇದು ಬಿಟ್ಟರೆ ಅವರು ಜಸಾಮಾನ್ಯರೊಂದಿಗೆ ಸಂಪರ್ಕಕ್ಕೆ ಎಲ್ಲೂ ಬಂದಿರಲಿಲ್ಲ.