ಬಡವರಿಗೆ ಆರೋಗ್ಯ ಸೇವೆ ಒದಗಿಸಲು ಸರಕಾರ ಬದ್ಧ: ಸಿಎಂ ಯಡಿಯೂರಪ್ಪ
ಕೇಂದ್ರ ಸಚಿವ ಡಾ.ಹರ್ಷವರ್ಧನ್ ರಿಂದ ವಿಮ್ಸ್ ನ 'ಟ್ರೋಮಾ ಸೆಂಟರ್' ಲೋಕಾರ್ಪಣೆ
![ಬಡವರಿಗೆ ಆರೋಗ್ಯ ಸೇವೆ ಒದಗಿಸಲು ಸರಕಾರ ಬದ್ಧ: ಸಿಎಂ ಯಡಿಯೂರಪ್ಪ ಬಡವರಿಗೆ ಆರೋಗ್ಯ ಸೇವೆ ಒದಗಿಸಲು ಸರಕಾರ ಬದ್ಧ: ಸಿಎಂ ಯಡಿಯೂರಪ್ಪ](/images/placeholder.jpg)
ಬೆಂಗಳೂರು, ಆ. 31: ರಾಜ್ಯದ ಎಲ್ಲ ವರ್ಗದ ಬಡವರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಸರಕಾರ ಬದ್ಧ. ಸರಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಲು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸರಕಾರ ಜತೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.
ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ವಿಮ್ಸ್) ಪ್ರಧಾನಮಂತ್ರಿ ಸ್ವಾಸ್ಥ್ಯ ಯೋಜನೆಯಡಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಟ್ರಾಮಾ ಸೆಂಟರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯ ಪ್ರವೃತ್ತವಾಗಿದೆ. ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೊರೋನ ಸೋಂಕನ್ನು ಸಮರ್ಪಕವಾಗಿ ನಿಭಾಯಿಸುವ ಜತೆಗೆ ಸುಗಮ ಜನಜೀವನಕ್ಕೂ ಸರಕಾರ ಪ್ರಯತ್ನ ಮಾಡುತ್ತಿದೆ ಎಂದ ಯಡಿಯೂರಪ್ಪ, ರಾಜ್ಯಕ್ಕೆ ಎಲ್ಲ ರೀತಿಯ ನೆರವು, ಸಹಕಾರ ನೀಡುತ್ತಿರುವ ಕೇಂದ್ರ ಸರಕಾರಕ್ಕೆ ಧನ್ಯವಾದ ಹೇಳಿದರು. ಅಲ್ಲದೆ, ಕಲಬುರಗಿಯಲ್ಲಿಯ ಆಸ್ಪತ್ರೆಯನ್ನು ಏಮ್ಸ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವಂತೆ ದಿಲ್ಲಿಯಿಂದ ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಹರ್ಷವರ್ಧನ್ ಅವರಿಗೆ ಮನವಿ ಮಾಡಿದರು.
ಈ ಸಂಬಂಧ ಈಗಾಗಲೇ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಅದನ್ನು ಪರಿಗಣಿಸಿ ಕಲಬುರಗಿಯ ಆಸ್ಪತ್ರೆಯನ್ನು ಏಮ್ಸ್ ಮಾದರಿಯಲ್ಲಿ ಮೇಲ್ದರ್ಜೇಗೆರಿಸಿ ಹಿಂದುಳಿದ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಆರೋಗ್ಯ ಸವಲತ್ತುಗಳು ಸಿಗಲು ನೆರವಾಗಬೇಕು ಎಂದ ಅವರು, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರಂಭಿಸಿರುವ ಟ್ರಾಮಾ ಸೆಂಟರ್ ಅತ್ಯಂತ ಸುಸಜ್ಜಿತವಾಗಿದ್ದು, 200 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಎಲ್ಲ ರೀತಿಯ ತುರ್ತು ಚಿಕಿತ್ಸೆಗೆ ಈ ಕೇಂದ್ರದಲ್ಲಿ ಸಕಲ ಸವಲತ್ತುಗಳು ಇವೆ. ಹಾಗಾಗಿ ಈ ಭಾಗದ ಜನ ತುರ್ತು ಚಿಕಿತ್ಸೆಗೆ ಬೆಂಗಳೂರಿಗೆ ಬರುವುದನ್ನು ಈ ಕೇಂದ್ರ ತಪ್ಪಿಸಲಿದೆ. ಆ ಭಾಗದ ಜನತೆಗೆ ತುರ್ತು ಚಿಕಿತ್ಸೆ ಲಭ್ಯವಾಗಲಿದೆ ಎಂದು ಅವರು ಹೇಳಿದರು.
ಉಪಯುಕ್ತ: ಬಳ್ಳಾರಿ ಜಿಲ್ಲೆಯಲ್ಲಿ `ಸೂಪರ್ ಸ್ಪೆಷಾಲಿಟಿ ಟ್ರೋಮಾ ಸೆಂಟರ್' ತೆರೆದಿರುವುದು ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದ ವೈದ್ಯಕೀಯ ಸಚಿವ ಡಾ.ಸುಧಾಕರ್, ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯುನ್ನತ ಟ್ರೋಮಾ ಸೆಂಟರ್ ತೆರೆದಿರುವುದು ಅತ್ಯಂತ ಅವಶ್ಯ. ಪ್ರತಿವರ್ಷ ರಾಜ್ಯದಲ್ಲಿ 4.7 ಲಕ್ಷ ಜನರು ರಸ್ತೆ ಅಪಘಾತಕ್ಕೆ ಒಳಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಮೃತಪಡುತ್ತಿದ್ದಾರೆ. ರಸ್ತೆ ಅಪಘಾತ ನಡೆದ 1 ಗಂಟೆ ಗೋಲ್ಡನ್ ಅವರ್ ಎಂದು ಪರಿಗಣಿಸುತ್ತೇವೆ. ಈ ಅವಧಿಯಲ್ಲಿ ಚಿಕಿತ್ಸೆ ನೀಡಿದರೆ ಬದುಕಿಸಬಹುದು. ಇಂಥ ತುರ್ತು ಚಿಕಿತ್ಸೆಗಾಗಿ ದೂರದ ಬೆಂಗಳೂರಿಗೆ ಬರುವ ಅಗತ್ಯವಿತ್ತು. ಈಗ ಬಳ್ಳಾರಿ ಸುತ್ತಮುತ್ತಲಿನ ಜಿಲ್ಲೆ ಹಾಗೂ ರಾಜ್ಯದಲ್ಲಿ ತುರ್ತು ಚಿಕಿತ್ಸೆ ಟ್ರೋಮಾ ಕೇಂದ್ರದಲ್ಲಿ ಪಡೆಯಬಹುದು ಎಂದರು.
ನೂತನ ಟ್ರೋಮಾ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಕೊಡುಗೆ ಅಪಾರ. ಒಟ್ಟು 200 ಬೆಡ್ ಸಾರ್ಮರ್ಥ್ಯದ ಟ್ರೋಮಾ ಸೆಂಟರ್ 72 ಐಸಿಯು ಬೆಡ್, 20 ವೆಂಟಿಲೇಟರ್ ಹಾಗೂ ಜನರಲ್ ವಾರ್ಡ್ ಗಳನ್ನು ಒಳಗೊಂಡಿದೆ. ಹತ್ತಿರದ ನೆರೆ ರಾಜ್ಯದಲ್ಲಿ ಅಪಘಾತವಾದರೂ ಈ ಟ್ರೋಮಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲು ಸಹಕಾರಿ. ವೈದ್ಯಕೀಯ ಸೇವೆಯಲ್ಲಿ ಇತರೆ ರಾಜ್ಯಗಳಿಂತ ಕರ್ನಾಟಕ ಮುಂಚೂಣಿಯಲ್ಲಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಸೂಕ್ತ ಚಿಕಿತ್ಸೆಗಾಗಿ ಕಡಿಮೆ ಅವಧಿಯಲ್ಲಿ 20 ಸಾವಿರ ಐಸಿಯು ಬೆಡ್ಗಳ ನಿರ್ಮಾಣವನ್ನು ಮಾಡುವ ಮೂಲಕ ರಾಜ್ಯದ ಸಾಮರ್ಥ್ಯ ತೋರಿಸಿದ್ದೇವೆ ಎಂದರು.
ಕಾಲೇಜು ಪ್ರಾರಂಭ: ಕಾರ್ಯಕ್ರಮದ ನಡುವೆ ಕೇಂದ್ರ ಸಚಿವ ಹರ್ಷವರ್ಧನ್ ಅವರು ಕರ್ನಾಟಕದಲ್ಲಿ ಶೀಘ್ರವೇ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ಹೇಳಿದರು. ಅದಕ್ಕೆ ಉತ್ತರಿಸಿದ ಸಚಿವರು, ಚಿಕ್ಕಬಳ್ಳಾಪುರ ಸೇರಿದಂತೆ 4 ನೂತನ ವೈದ್ಯಕೀಯ ಕಾಲೇಜುಗಳು 2021 ರೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು. ಇತ್ತೀಚೆಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ವೇಳೆ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾಗಿ ಉಲ್ಲೇಖಿಸಿದರು. ವಿಮ್ಸ್ ನ ನೂತನ ಸಿಟಿ ಸ್ಯಾನರನ್ನು ಸಚಿವ ಡಾ.ಸುಧಾಕರ್ ಉದ್ಘಾಟಿಸಿದರು. ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನ್ಕುಮಾರ್ ಚೌಬೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಪಾಲ್ಗೊಂಡಿದ್ದರು.
ಟ್ರೋಮಾ ಸೆಂಟರ್ ನ ವಿಶೇಷತೆ
150 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಟ್ರೋಮಾ ಕೇಂದ್ರ ಒಟ್ಟು 200 ಬೆಡ್ ಒಳಗೊಂಡಿದೆ. 72 ಐಸಿಯು ಬೆಡ್, 20 ವೆಂಟಿಲೇಟರ್, ಸಿಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್ ರೇ ಸೌಕರ್ಯ ಇರಲಿದೆ. ಜೊತೆಗೆ ಸೂಪರ್ ಸ್ಪೆಷಾಲಿಟಿ ಎಮರ್ಜೆನ್ಸಿ ಹಾಗೂ ಟ್ರೋಮಾ, ನ್ಯೂರೋ ಸರ್ಜರಿ ಹಾಗೂ ಆರ್ಥೋಪೆಡಿಕ್ ಸೇವೆ ಒಳಗೊಂಡಿದೆ.