ಬೆಳ್ತಂಗಡಿ: ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಕ್ಕೆ ಹೊಸ ಮನೆ ಹಸ್ತಾಂತರ
ಬೆಳ್ತಂಗಡಿ: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿದ ಬಾರೀ ಮಳೆ ಹಾಗೂ ಪ್ರವಾಹದಿಂದ ಸೂರು ಕಳೆದುಕೊಂಡ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಳಿವೇಲಿ ರೆನಿಯವರಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಹೊಸ ಮನೆಯನ್ನು ನಿರ್ಮಾಣ ಮಾಡಲಾಗಿದ್ದು ಅವರಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಅವರು ನೂತನ ಮನೆಯ ಉದ್ಮಘಾಟನೆಯನ್ನು ನರೆವೇರಿಸಿ ಮನೆಯನ್ನು ಫಲಾನುಭವಿಗೆ ಹಸ್ತಾಂತರ ಮಾಡಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ಫಾ. ಬಿನೋಯಿ ಎ. ಜೆ, ತೋಟತ್ತಾಡಿ ಸಂತ ಅಂತೋನಿ ಚರ್ಚ್ ನ ಧರ್ಮಗುರುಗಳಾದ ಫಾ. ತೋಮಸ್ ಪಾರೆಕ್ಕಾಟ್ಟೀಲ್ ನೂತನ ಗೃಹಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕೆ.ಎಸ್.ಎಮ್.ಸಿ.ಎ ಪ್ರಾಂತೀಯ ಅಧ್ಯಕ್ಷರಾದ ಕೆ. ಕೆ. ಸೆಬಾಸ್ಟಿಯನ್, ತಾಲೂಕು ಪಂಚಾಯತು ಸದಸ್ಯ ವಿ.ಟಿ. ಸೆಬಾಸ್ಟಿಯನ್, ಪಿತೃವೇದಿ ಅಧ್ಯಕ್ಷರಾದ ಟೈಟಸ್ ಮಾದವತ್, ಗಂಡಿಬಾಗಿಲು ಚರ್ಚಿನ ಟ್ರಸ್ಟೀಯಾದ ಜೋಸೆಫ್ ಹಾಗೂ ಮನೋಜ್ ಮಾದವತ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆಯಾದ ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಮಾಜಿ ಶಾಸಕ ವಸಂತ ಬಂಗೇರರ ಆರ್ಥಿಕ ನೆರವು, ಕೆ.ಎಸ್.ಎಮ್.ಸಿ.ಎ ಘಟಕ , ಗಂಡಿಬಾಗಿಲು, ಚರ್ಚಿನ ಮಾತೃವೇದಿ, ಪಿತೃವೇದಿ, ಎಸ್.ಎಮ್.ವೈ.ಎಮ್, ದಿವ್ಯಬಾಲರ ಸಭೆ, ಮಿಷನ್ ಲೀಗ್ ಈ ಗೃಹ ನಿರ್ಮಾಣಕ್ಕೆ ಆರ್ಥಿಕ ಸಹಕಾರ ಒದಗಿಸಿದರು. ಶಿಜು ಸಿ.ವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗಂಡಿಬಾಗಿಲು ಸಂತ ತೋಮಸ್ ಚರ್ಚ್ನ ಧರ್ಮಗುರುಗಳಾದ ವಂ. ಸ್ವಾ. ಮ್ಯಾಥ್ಯೂ ವೆಟ್ಟಂತಡತ್ತಿಲ್ ನೂತನ ಮನೆ ನಿರ್ಮಾಣದ ಕಾರ್ಯದಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದವಿತ್ತರು.