ಪುತ್ತೂರು: ಪೊಲೀಸರು ವಶಪಡಿಸಿಕೊಂಡ ಹಸು-ಕರುವನ್ನು ಹಿಂದಿರುಗಿಸುವಂತೆ ನ್ಯಾಯಾಲಯ ಆದೇಶ
ಪುತ್ತೂರು, ಸೆ.2: ಅಕ್ರಮ ಸಾಗಾಟದ ಆರೋಪದಲ್ಲಿ ಸಂಪ್ಯ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದ ಹಸು ಮತ್ತು ಕರುವನ್ನು ಆರೋಪಿಗೆ ಹಿಂದಿರುಗಿಸುವಂತೆ ಪುತ್ತೂರು ನ್ಯಾಯಾಲಯ ಆದೇಶಿಸಿದೆ.
ಕಳೆದ ಆಗಸ್ಟ್ 20ರಂದು ಇರ್ದೆ ಗ್ರಾಮದ ಚೆಲ್ಯಡ್ಕ ಎಂಬಲ್ಲಿ ಮಾರುತಿ ಓಮ್ನಿ ಕಾರಿನಲ್ಲಿ ಹಸು ಮತ್ತು ಕರುವನ್ನು ಕೊಂಡೊಯ್ಯುತ್ತಿದ್ದ ವೇಳೆ ಅಕ್ರಮ ಗೋ ಸಾಗಾಟದ ಆರೋಪದಲ್ಲಿ ಇಬ್ಬರನ್ನು ಸಂಪ್ಯ ಠಾಣಾ ಪೊಲೀಸರು ಬಂಧಿಸಿದ್ದರು. ಗುಮ್ಮಟಗದ್ದೆ ನಿವಾಸಿ ಬಾಲಕೃಷ್ಣ ಗೌಡ(49) ಮತ್ತು ಆರ್ಲಪದವು ನಿವಾಸಿ ಮೂಸಾ(58) ಎಂಬವರನ್ನು ಬಂಧಿಸಿದ್ದ ಪೊಲೀಸರು, ಕಾರು ಹಾಗೂ ಹಸು-ಕರುವನ್ನು ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಈ ನಡುವೆ ಮೂಸಾ ಅವರು ಪೊಲೀಸರು ವಶಪಡಿಸಿಕೊಂಡಿರುವ ಹಸು ಮತ್ತು ಕರುವನ್ನು ತನಗೆ ಹಿಂದಿರುಗಿಸುವಂತೆ ಕೋರಿ ನ್ಯಾಯವಾದಿ ಎಂ.ರಮ್ಲತ್ ಮೂಲಕ ಪುತ್ತೂರು ಎಡಿಷನಲ್ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಹಸು ಮತ್ತು ಕರುವನ್ನು ಅರ್ಜಿದಾರ ಮೂಸಾರಿಗೆ ಹಿಂದಿರುಗಿಸುವಂತೆ ಆದೇಶಿಸಿದೆ.