ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಪರಿಹಾರ ಮೊತ್ತ ತಲಾ 14,100ರೂ.ಗೆ ಹೆಚ್ಚಳ; ಹೈಕೋರ್ಟ್ ಗೆ ಹೇಳಿಕೆ
![ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಪರಿಹಾರ ಮೊತ್ತ ತಲಾ 14,100ರೂ.ಗೆ ಹೆಚ್ಚಳ; ಹೈಕೋರ್ಟ್ ಗೆ ಹೇಳಿಕೆ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಪರಿಹಾರ ಮೊತ್ತ ತಲಾ 14,100ರೂ.ಗೆ ಹೆಚ್ಚಳ; ಹೈಕೋರ್ಟ್ ಗೆ ಹೇಳಿಕೆ](https://www.varthabharati.in/sites/default/files/images/articles/2020/09/2/257462-1599051086.jpg)
ಬೆಂಗಳೂರು, ಸೆ.2: ನಗರದ ಕಾಚರಕನಹಳ್ಳಿ ಕೊಳೆಗೇರಿ ಪ್ರದೇಶದಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ತಲಾ 14,100ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರಕಾರವು ಮಾಹಿತಿ ನೀಡಿದೆ.
ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಹಿಂದೆ ನಿಗದಿ ಮಾಡಿದ್ದ ತಲಾ 6,100 ಪರಿಹಾರವನ್ನು ಹೆಚ್ಚಳ ಮಾಡಬೇಕು ಎಂದು ಸರಕಾರಕ್ಕೆ ಆದೇಶ ನೀಡಿತ್ತು.
ರಿಟ್ ಅರ್ಜಿದಾರರ ಪರ ಹಾಜರಾಗಿದ್ದ ವಕೀಲರು ವಾದಿಸಿ, 1 ಎಕರೆ 6 ಗುಂಟೆ ಭೂಮಿಯನ್ನು ಕೊಳೆಗೇರಿ ಎಂದು ಘೋಷಿಸಲಾಗಿದೆ. 1 ಎಕರೆ 6 ಗುಂಟೆ ಜಾಗ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಕೊಳಚೆ ನಿರ್ಮೂಲನಾ ಮಂಡಳಿ 2016ರಲ್ಲಿ ಮನವಿ ಸಲ್ಲಿಸಿದೆ. ಭೂಮಿ ಹಸ್ತಾಂತರವಾದರೆ ಸಮಸ್ಯೆ ಇತ್ಯರ್ಥವಾಗಲಿದೆ. ಗುಡಿಸಲು ನಾಶ ಘಟನೆಯ ತನಿಖೆಯ ಮೇಲ್ವಿಚಾರಣೆಯನ್ನೂ ನ್ಯಾಯಾಲಯ ಮಾಡಬೇಕು ಎಂದು ಕೋರಿದರು.
ಕೊಳಚೆ ನಿರ್ಮೂಲನಾ ಮಂಡಳಿ ಕೇಳಿರುವ ಭೂಮಿ ಹಸ್ತಾಂತರದ ಪ್ರಕ್ರಿಯೆಯ ಸದ್ಯದ ಸ್ಥಿತಿ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು. ಈವರೆಗೆ ನಿರ್ಧಾರ ಕೈಗೊಳ್ಳದೆ ಇದ್ದರೆ ಕೂಡಲೇ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ಗುಡಿಸಲು ನಾಶದ ಕುರಿತ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಸರಕಾರಕ್ಕೆ ಪೀಠ ನಿರ್ದೇಶನ ನೀಡಿತು.
ಗುಡಿಸಲು ನಾಶದಿಂದ 170ಕ್ಕೂ ಹೆಚ್ಚು ಕುಟುಂಬಗಳು ತೊಂದರೆಗೆ ಸಿಲುಕಿವೆ. ಅದರಲ್ಲಿ 119 ಕುಟುಂಬಗಳು ಅದೇ ಜಾಗದಲ್ಲಿ ಮತ್ತೆ ಗುಡಿಸಲು ನಿರ್ಮಿಸಿಕೊಂಡಿವೆ ಎಂದು ಸರಕಾರ ತಿಳಿಸಿದೆ. ಪೊಲೀಸರ ಅಫಿಡವಿಟ್ ಪ್ರಕಾರ, ಕಲ್ಯಾಣ ಮಂಟಪ ಹೊಂದಿರುವ ಇಬ್ಬರು ಲಾಕ್ಡೌನ್ ಅವಧಿ ಬಳಸಿಕೊಂಡು ಗುಡಿಸಲು ನಾಶಪಡಿಸಿದ್ದಾರೆ.