ಉಡುಪಿ: 100ರ ಗಡಿದಾಟಿದ ಕೊರೋನ ಮೃತರ ಸಂಖ್ಯೆ
ಬುಧವಾರ 167 ಮಂದಿಗೆ ಸೋಂಕು ದೃಢ

ಸಾಂದರ್ಭಿಕ ಚಿತ್ರ
ಉಡುಪಿ, ಸೆ.2: ಜಿಲ್ಲೆಯಲ್ಲಿ ಬುಧವಾರ ಮೂವರು ಕೊರೋನಕ್ಕೆ ಬಲಿಯಾಗಿದ್ದು, ಈ ಮೂಲಕ ರೋಗಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 100ರ (102) ಗಡಿದಾಟಿದೆ. ಜಿಲ್ಲೆಯಲ್ಲಿ ಮೇ 14ರಂದು ಮೊದಲ ಕೋವಿಡ್ ಸಾವು ಸಂಭವಿಸಿದ್ದು, ಮುಂಬಯಿಯಿಂದ ಆಗಮಿಸಿದ 54 ವರ್ಷ ಪ್ರಾಯದ ಪುರುಷ ಕೆಎಂಸಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಬಳಿಕ ನಡೆದ ಪರೀಕ್ಷೆಯ ವೇಳೆ ಅವರಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು. ಇದೀಗ ಮೂರೂವರೆ ತಿಂಗಳ ನಂತರ ಮೃತರ ಸಂಖ್ಯೆ ಶತಕದ ಗಡಿ ದಾಟಿದಂತಾಗಿದೆ.
ಬುಧವಾರ ಜಿಲ್ಲೆಯಲ್ಲಿ 167 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದು, 812 ಮಂದಿಯ ಫಲಿತಾಂಶ ನೆಗೆಟಿವ್ ಆಗಿವೆ. ಈವರೆಗೆ ಜಿಲ್ಲೆಯಲ್ಲಿ ಕೊರೋನಕ್ಕೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ 11,924ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಕೋವಿಡ್ ಪಾಸಿಟಿವ್ ಪತ್ತೆಯಾದ 167 ಮಂದಿಯಲ್ಲಿ ಉಡುಪಿ ತಾಲೂಕಿನ 92 ಮಂದಿ, ಕುಂದಾಪುರ ತಾಲೂಕಿನ 19 ಹಾಗೂ ಕಾರ್ಕಳ ತಾಲೂಕಿನ 52 ಮಂದಿ ಇದ್ದು, ಉಳಿದಂತೆ ಹೊರಜಿಲ್ಲೆಯಿಂದ ಉಡುಪಿಗೆ ಚಿಕಿತ್ಸೆಗೆಂದು ಬಂದ ನಾಲ್ವರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದವರು ವಿವರಿಸಿದರು.
ಇಂದು ಮಕ್ಕಳು ಸೇರಿದಂತೆ 101 ಮಂದಿ ಪುರುಷರು ಹಾಗೂ 66 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 28 ಪುರುಷರು ಹಾಗೂ 27 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ತಿಳಿಸಿದರು.
ಪಾಸಿಟಿವ್ ದೃಢಗೊಂಡ 167 ಮಂದಿಯಲ್ಲಿ 46 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 61 ಮಂದಿ ಶೀತಜ್ವರದಿಂದ, ಇಬ್ಬರು ಉಸಿರಾಟ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ದೇಶೀಯ ಪ್ರವಾಸದಿಂದ ಹಾಗೂ ಅಂತಾರಾಷ್ಟ್ರೀಯ ಪ್ರವಾಸದಿಂದ ಮರಳಿದ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ 56 ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.
250 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಬುಧವಾರ 250 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 65ಮಂದಿ ಕೋವಿಡ್ ಆಸ್ಪತ್ರೆಗಳಿಂದ, 185 ಮಂದಿ ಹೋಮ್ ಐಸೋಲೇಷನ್ನಲ್ಲಿದ್ದು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 9601ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2221 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ 1090 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1131 ಮಂದಿ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆುಯುತ್ತಿದ್ದಾರೆ ಎಂದು ಡಿಎಚ್ಓ ಹೇಳಿದರು.
971 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಬುಧವಾರ ಒಟ್ಟು 971 ಮಂದಿಯ ಗಂಟಲುದ್ರವದ ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 732 ಮಂದಿ, ಕೋವಿಡ್ ಸಂಪರ್ಕಿತರು 111 ಮಂದಿ ಇದ್ದರೆ, ಉಸಿರಾಟ ತೊಂದರೆಯ 6 ಮಂದಿ, ಶೀತಜ್ವರದಿಂದ ಬಳಲುವ 30 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್ಸ್ಪಾಟ್ಗಳಿಂದ ಆಗಮಿಸಿದ 92 ಮಂದಿಯ ಸ್ಯಾಂಪಲ್ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪರೀಕ್ಷೆಗಾಗಿ ಪಡೆದ 971 ಸ್ಯಾಂಪಲ್ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 73256ಕ್ಕೇರಿದೆ. ಇವುಗಳಲ್ಲಿ ಈವರೆಗೆ 60,975 ನೆಗೆಟಿವ್, 11924 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 102 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 357 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.
ಮೂವರ ಸಾವು: ಜಿಲ್ಲೆಯಲ್ಲಿ ಉಡುಪಿ ತಾಲೂಕಿನ ಮೂವರು ಹಿರಿಯ ನಾಗರಿಕರು ಅನ್ಯ ಕಾಯಿಲೆಗಳಿಗೆ ಚಿಕಿತ್ಸೆಯಲ್ಲಿದ್ದು, ಕೋವಿಡ್-19ಕ್ಕೆ ಪಾಸಿಟಿವ್ ಬಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಧವಾರದ ದೈನಂದಿನ ಬುಲೆಟಿನ್ ತಿಳಿಸಿದೆ.
70 ವರ್ಷ ಪ್ರಾಯದ ವೃದ್ಧರು ನ್ಯುಮೋನಿಯಾ, ಮಧುಮೇಹ ಸಮಸ್ಯೆಗಾಗಿ ಆ.31ರಂದು ಆಸ್ಪತ್ರೆಗೆ ದಾಖಲಾಗಿದ್ದು, ಸೆ.1ರ ಮಂಗಳವಾರ ಮೃತಪಟ್ಟಿದ್ದಾರೆ. ಆ.29ರಂದು ಅಧಿಕ ರಕ್ತದೊತ್ತಡ ಹಾಗೂ ಉಸಿರಾಟದ ತೊಂದರೆಗಾಗಿ ಆಸ್ಪತ್ರೆಗೆ ದಾಖಲಾದ 85ರ ಹರೆಯದ ವೃದ್ಧರು ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಮೃತಪಟ್ಟಿದ್ದರು. ಅದೇ ರೀತಿ 55 ವರ್ಷದ ಪುರುಷರು ಕಿಡ್ನಿ ಮತ್ತು ಅಧಿಕ ರಕ್ತದೊತ್ತಡದ ಕಾರಣಕ್ಕಾಗಿ ಆ.25ರಿಂದ ಚಿಕಿತ್ಸೆಯಲ್ಲಿರುತ್ತಾ 31ರಂದು ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.







