ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣ : ಆರೋಪಿ ಆದಿತ್ಯರಾವ್ಗೆ ಮಂಪರು ಪರೀಕ್ಷೆ

ಮಂಗಳೂರು, ಸೆ.3: ನಗರ ಹೊರವಲಯದ ಬಜ್ಪೆ ಕೆಂಜಾರಿನಲ್ಲಿರುವ ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಜ.20ರಂದು ಬಾಂಬ್ ಇರಿಸಿದ್ದ ಆರೋಪಿ ಆದಿತ್ಯರಾವ್ (36)ನ ಮಂಪರು ಪರೀಕ್ಷೆಯು ಗುರುವಾರ ಬೆಂಗಳೂರಿನ ಮಡಿವಾಳದ ಫೋರೆನ್ಸಿಕ್ ಸೈನ್ಸ್ ಪ್ರಯೋಗಾಲಯದಲ್ಲಿ ನಡೆಯಿತು.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪೊಲೀಸ್ ತಂಡವು ಮಂಗಳೂರು ಜೈಲ್ನಲ್ಲಿದ್ದ ಆದಿತ್ಯ ರಾವ್ನನ್ನು ಬೆಂಗಳೂರಿಗೆ ಬುಧವಾರ ಕರೆದೊಯ್ದಿದ್ದರು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಮಂಪರು ಪರೀಕ್ಷೆ ನಡೆಸಲಾಗಿದೆ. ಶುಕ್ರವಾರವೂ ಮಂಪರು ಪರೀಕ್ಷೆ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಆದಿತ್ಯರಾವ್ನ ಮಂಪರು ಪರೀಕ್ಷೆಗೆ ಪೊಲೀಸರು ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಾಲಯ ಅನುಮತಿ ನೀಡಿದ್ದರೂ ಕೊರೋನ-ಲಾಕ್ಡೌನ್ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆಯು ವಿಳಂಬವಾಗಿತ್ತು. ಇದೀಗ ಗುರುವಾರ ಮಂಪರು ಪರೀಕ್ಷೆ ಆರಂಭಗೊಂಡಿದೆ.
ಪ್ರಸ್ತುತ ಮಂಗಳೂರು ಜೈಲಿನಲ್ಲಿರುವ ಆರೋಪಿ ಆದಿತ್ಯರಾವ್ ವಿರುದ್ಧ ಜೂ.11ರಂದು ನಗರ ಪೊಲೀಸರು 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಎಫ್ಎಸ್ಎಲ್ ವರದಿಯ ಪ್ರಕಾರ ವಿಮಾನ ನಿಲ್ದಾಣದಲ್ಲಿಟ್ಟ ಬಾಂಬ್ ‘ನೈಜ ಬಾಂಬ್’ ಆಗಿತ್ತು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು.







