ಹೊಸಬೆಟ್ಟು ಶ್ರೀರಾಘವೇಂದ್ರ ಮಠ ಶ್ರೀಪುತ್ತಿಗೆ ಮಠಕ್ಕೆ ಹಸ್ತಾಂತರ

ಸುರತ್ಕಲ್, ಸೆ.3: ಹೊಸಬೆಟ್ಟುನಲ್ಲಿರುವ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಆಡಳಿತವನ್ನು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀಪುತ್ತಿಗೆ ಮಠಕ್ಕೆ ಹಸ್ತಾಂತರಿಸಲಾಗಿದೆ.
ಹೊಸಬೆಟ್ಟು ರಾಘವೇಂದ್ರ ಮಠದ ನವ ವೃಂದಾವನ ಸೇವಾ ಪ್ರತಿಷ್ಠಾನದ ವತಿಯಿಂದ ಮಠದಲ್ಲಿ ಆಯೋಜಿಸಲಾದ ಗುರು ಸಮರ್ಪಣಾ ಸಮಾರಂಭದಲ್ಲಿ ದಿ.ಹರಿದಾಸರತ್ನ ಹೊಸಬೆಟ್ಟು ವಾದೀಶ ಆಚಾರ್ಯರು ಸ್ಥಾಪಿಸಿದ ಹೊಸಬೆಟ್ಟು ಶ್ರೀರಾಘವೇಂದ್ರ ಮಠವನ್ನು ಅವರ ಇಚ್ಛೆಯಂತೆ ಮಗ ರಾಘವೇಂದ್ರ ಆಚಾರ್ಯ ಶ್ರೀಮಠದ ಸೇವಾ ಕೈಂಕರ್ಯಗಳ ಅಧಿಕಾರವನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು.
ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪೂಜೆ,ಆರಾಧನೆ ಯನ್ನು ಇನ್ನೂ ಹೆಚ್ಚಿನ ಕಾರ್ಯಕ್ರಮಗಳೊಂದಿಗೆ ನಡೆಸಿಕೊಂಡು ಹೋಗುವು ದಾಗಿ ಪುತ್ತಿಗೆ ಶ್ರೀಗಳು ತಿಳಿಸಿದರು. ಹೊಸಬೆಟ್ಟು ಶ್ರೀರಾಘವೇಂದ್ರ ಮಠ, ಪುತ್ತಿಗೆ ಮಠದ 18ನೇ ರಾಘವೇಂದ್ರ ಮಠವಾಗಿ ಸೇರ್ಪಡೆಗೊಂಡಿದೆ.
ಈ ಸಂದರ್ಭದಲ್ಲಿ ಭಜನಾಮೃತ ಸಿಡಿಯನ್ನು ಅನಾವರಣಗೊಳಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್, ಗುರುಪುರ ಶ್ರೀವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರ್ನಾಟಕ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ, ಮಂಗಳೂರು ಮಹಾನಗರಪಾಲಿಕೆ ಉಪ ಮೇಯರ್ ವೇದಾವತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ, ಹೊಸಬೆಟ್ಟು ವಾರ್ಡ್ ಕಾರ್ಪೊರೇಟರ್ ವರುಣ್ ಚೌಟ ಹಾಗೂ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.







