ಇಂದ್ರಜಿತ್ ಮಾತಿನಲ್ಲಿ ಸತ್ಯವಿದೆ, ಸಿಸಿಬಿ ಸಮಗ್ರವಾಗಿ ತನಿಖೆ ಮಾಡಲಿ: ಶಾಸಕ ಎನ್.ಎ ಹಾರಿಸ್

ಬೆಂಗಳೂರು, ಸೆ.3: ಡ್ರಗ್ಸ್ ದಂಧೆ ವಿಚಾರದಲ್ಲಿ ನಮ್ಮ ಕಾನೂನು ಗಟ್ಟಿಯಾಗಿಲ್ಲ. ಇಂದ್ರಜಿತ್ ಲಂಕೇಶ್ ಮಾತಿನಲ್ಲಿ ಸತ್ಯವಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಶಾಸಕ ಎನ್. ಎ. ಹಾರಿಸ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ ವಿಚಾರಗಳನ್ನು ಸಿಸಿಬಿ ಪೊಲೀಸರು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇವಲ ನಟ ನಟಿಯರು ಎಂದು ನಾವು ಒಂದೆರಡು ದಿನ ಸುದ್ದಿ ಮಾಡಿ ತೋರಿಸಿದರೆ ಪ್ರಯೋಜನ ಇಲ್ಲ. ನಮ್ಮ ರಾಜ್ಯದ ಕಾನೂನು ಇನ್ನಷ್ಟು ಗಟ್ಟಿಯಾದರೆ ಮಾತ್ರ ಡ್ರಗ್ಸ್ ಹಾವಳಿ ತಡೆಗಟ್ಟಬಹುದು. ಇಲ್ಲದೆ ಹೋದರೆ ಪ್ರಯೋಜನವಿಲ್ಲ. ಇಂದ್ರಜಿತ್ ಲಂಕೇಶ್ ಹೇಳುವುದು ಸರಿ ಇದೆ. ಜೊತೆಗೆ ಸಮಗ್ರವಾಗಿ ತನಿಖೆ ಆಗಲಿ ಎಂದರು.
ಡ್ರಗ್ಸ್ ನ ಹಾವಳಿ ತಪ್ಪಿಸುವಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯ. ನಮ್ಮ ಕಾನೂನು ಇಂಥವರಿಗೆ ಶಿಕ್ಷೆ ವಿಧಿಸುವ ವಿಚಾರದಲ್ಲಿ ದುರ್ಬಲವಾಗಿದೆ. ಅದನ್ನು ಕಠಿಣಗೊಳಿಸಬೇಕು. ವ್ಯಾಪಾರ ಮಾಡುವವರು ಇದರಲ್ಲಿ ಹೆಚ್ಚಾಗಿದ್ದು, ರಾಜಕೀಯ ವ್ಯಕ್ತಿ, ಸಿನಿಮಾ ನಟರು ಅಥವಾ ಯಾರೇ ಇರಲಿ, ಅವರನ್ನು ತನಿಖೆಗೊಳಪಡಿಸಬೇಕು. ಅಂತವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.
ಕಾನೂನು ಬಲಪಡಿಸದಿದ್ದರೆ ಕಷ್ಟ ಆಗುತ್ತೆ. ಯಂಗ್ ಇಂಡಿಯಾ ಇದೆ, ಅದು ಯಂಗ್ ಆಗೇ ಇರಬೇಕು. ಇದರಲ್ಲಿ ಯಾರೇ ಇರಲಿ, ಅವರನ್ನು ಸರಿಪಡಿಸಬೇಕು. ಸಿಸಿಬಿಗೆ ಸಂಪೂರ್ಣ ಬೆಂಬಲ ಇದೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನೂ ಇದರ ಬಗ್ಗೆ ಮಾತನಾಡುತ್ತಾ ಬಂದಿದ್ದೇನೆ. ರಾಜ್ಯ ಸರಕಾರ, ಕೇಂದ್ರ ಸರಕಾರ ಎರಡೂ ಒಟ್ಟೊಟ್ಟಿಗೆ ಡ್ರಗ್ಸ್ ಸಮಸ್ಯೆ ಹತ್ತಿಕ್ಕಲು ಕಠಿಣ ಕಾನೂನು ತರಬೇಕು ಎಂದು ಒತ್ತಾಯಿಸಿದರು.







