ಡಿಸಿ ಮನ್ನಾ ಜಮೀನಿನ ಸರ್ವೇಗೆ ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಸೆ. 3: ಜಿಲ್ಲೆಯ ಪತ್ರಿಯೊಂದು ತಾಲೂಕಿನ ಗ್ರಾಪಂಗಳಲ್ಲಿರುವ ಡಿಸಿ ಮನ್ನಾ ಜಮೀನಿನ ಬಗ್ಗೆ ಸಂಪೂರ್ಣವಾಗಿ ಸರ್ವೇ ನಡೆಸಿ ಅದರ ವರದಿ ಯನ್ನು ಆಯಾ ತಾಲೂಕಿನ ತಹಶೀಲ್ದಾರರು ಕಡ್ಡಾಯವಾಗಿ ನೀಡಬೇಕು.ಆಸ್ತಿಯನ್ನು ಹೊಂದಿರುವ ವ್ಯಕ್ತಿ ಹೆಚ್ಚುವರಿ ಆಸ್ತಿಗಾಗಿ ಡಿಸಿ ಮನ್ನಾ ಯೋಜನೆಯಡಿ ಭೂಮಿಯನ್ನು ಪಡೆಯಲು ಅರ್ಜಿ ಸಲ್ಲಿಸುವವರ ವಿರುದ್ಧ ಕ್ರಮ ಹಾಗೂ ಡಿಸಿ ಮನ್ನಾ ಜಮೀನಿನ ಭೂಮಿಯನ್ನು ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆ/ಸಮಿತಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಡಿಸಿ ಮನ್ನಾ ಜಮೀನಿನ್ನು ಬಳಕೆ ಮತ್ತು ಖಾಲಿ ಇರುವ ಭೂಮಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ನೀಡಬೇಕು. ಅಧಿಕಾರಿಗಳು ಬಡವರಿಗೆ, ಶೋಷಿತ ವರ್ಗದರಿಗೆ ಡಿಸಿ ಮನ್ನಾ ಭೂಮಿಯು ಸಮರ್ಪಕವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು. ಡಿಸಿ ಮನ್ನಾ ಜಮೀನಿನಲ್ಲಿ ಲೇ ಔಟ್ ನಿರ್ಮಾಣ ಮಾಡುವ ಸಂದರ್ಭ ಸ್ಥಳೀಯ ಮುಖಂಡರ ಸಮ್ಮುಖ ಸಭೆ ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಪೂರ್ವಜರ ಹೆಸರಲ್ಲಿದ್ದ ಆಸ್ತಿಯನ್ನು ಮಕ್ಕಳ ಹೆಸರಿನಲ್ಲಿ ವರ್ಗಾವಣೆ ಮಾಡುವ ಸಂದರ್ಭ ಕೆಲವು ತೊಂದರೆಗಳು ಉಂಟಾಗುತ್ತಿದ್ದು, ಅದರ ಬಗ್ಗೆಯೂ ಸಂಬಂದಪಟ್ಟ ತಹಶೀಲ್ದಾರರು ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
2019-20ನೇ ಸಾಲಿನಲ್ಲಿ ಸರಕಾರದಿಂದ ಬಿಡುಗಡೆಯಾದ ಎಸ್ಸಿಎಸ್ಟಿ ಮತ್ತು ಟಿಎಸ್ಪಿ ಅನುದಾನವನ್ನು ಹಲವು ಇಲಾಖೆಗಳು ಉತ್ತಮವಾಗಿ ಬಳಸಿ ಕೊಂಡು ಶೇ.87ರಷ್ಟು ಅಭಿವೃದ್ಧಿ ಹೊಂದಿರುವುದು ಹೆಮ್ಮಯ ಸಂಗತಿಯಾಗಿದೆ. ಜಿಲ್ಲೆಯ ಕೆಲವು ಇಲಾಖೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿಲ್ಲ. ಇಂತಹ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಂಡು ಅಭಿವೃದ್ಧಿಯತ್ತ ಗಮನ ನೀಡುವಂತೆ ಸಲಹೆ ನೀಡಿದರು.
ಎಸ್ಸಿಎಸ್ಟಿ ಮತ್ತು ಟಿಎಸ್ಪಿ ಅನುದಾನದಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ಆಯ್ಕೆಯು ಸಮರ್ಪಕವಾಗಿ ಕೂಡಿರಬೇಕು. ಅನುದಾನವಿಲ್ಲವೆಂದು ಯಾವುದೇ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಹಾಗೂ ಸರಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಅಂತಹ ಫಲಾನುಭವಿಗಳಿಗೆ ಸೌಲಭ್ಯವನ್ನು ನೀಡಬೇಕು. ಅವಶ್ಯಕತೆಯಿದ್ದಲ್ಲಿ ಬೇರೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಯೋಜನೆಯನ್ನು ಅನುಷ್ಟಾನ ಮಾಡಬೇಕು ಎಂದರು.
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಎಲ್ಲಾ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆಯನ್ನು ನೀಡಲಾಗುವುದು. ಮಹಾಕಾಳಿಪಡ್ಪುವಿನಲ್ಲಿ ಸಿದ್ಧವಾಗಿರುವ 32 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಅತೀ ಶೀಘ್ರದಲ್ಲಿ ಹಸ್ತಾಂತರ ಮಾಡಲಾಗುವುದು. ಮಹಿಳಾ ಪೌರ ಕಾರ್ಮಿಕರಿಗೆ ಮನಪಾ ವ್ಯಾಪ್ತಿಯಲ್ಲಿ ಡ್ರೆಸ್ರೂಂ ಮತ್ತು ಪ್ರತ್ಯೇಕ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್, ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಜಿಪಂ ಉಪ ಕಾರ್ಯದರ್ಶಿ ಆನಂದ ಕುಮಾರ್, ಡಿಸಿಪಿ ವಿನಯ್ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.







