ಉಡುಪಿ: ನಾಲ್ವರು ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆ
ಉಡುಪಿ, ಸೆ.3: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಆಯುತ್ತಿದ್ದ 4 ಮಂದಿ ಮಕ್ಕಳನ್ನು ಬುಧವಾರ ರಕ್ಷಿಸಿ, ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ.
ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೋಲಿಸ್ ಇಲಾಖೆ ಮಲ್ಪೆ, ಮಕ್ಕಳ ಸಹಾಯವಾಣಿ ಹಾಗೂ ಸ್ಪೂರ್ತಿ ವಿಶ್ವಾಸದ ಮನೆಯ ಸಹಯೋಗ ದೊಂದಿಗೆ ಇಲಾಖೆಯ ತಂಡ ಗದಗ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ವಲಸೆ ಕಾರ್ಮಿಕರ ಮೂವರು ಬಾಲಕರು ಮತ್ತು ಓರ್ವ ಬಾಲಕಿ ಸೇರಿದಂತೆ ಒಟ್ಟು 4 ಮಂದಿ ಮಕ್ಕಳ ರಕ್ಷಣೆ ಮಾಡಿದೆ.
ಬಾ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ತಿದ್ದುಪಡಿ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಯಾವುದೇ ಕೆಲಸ ಮಾಡಿದ್ದಲ್ಲಿ ಹಾಗೂ 14ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರು ಕಾರ್ಖಾನೆ, ಹೆಚ್ಚು ಸುಡುವ ದ್ರವ ತಯಾರಿ, ಗಣಿ ಕೆಲಸದಂತಹ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡಿಸಿಕೊಂಡಲ್ಲಿ ಮಾಲಕರಿಗೆ 6ರಿಂದ 2 ವರ್ಷ ಜೈಲು, 20,000ದಿಂದ 50,000ರೂ.ವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.
14 ವರ್ಷದೊಳಗಿನ ಮಕ್ಕಳನ್ನು ಮತ್ತು 15ರಿಂದ 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಕಾಯ್ದೆಯ ಪ್ರಕಾರ ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ಕಾರ್ಮಿಕ ಇಲಾಖೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದೆ.







