60 ಲಕ್ಷ ಉದ್ಯೋಗ ಸೃಷ್ಟಿಸುವ ಮಹತ್ವದ 'ಮಾಹಿತಿ ತಂತ್ರಜ್ಞಾನ(ಐಟಿ) ಕಾರ್ಯನೀತಿ'ಗೆ ಸಂಪುಟ ಒಪ್ಪಿಗೆ

ಬೆಂಗಳೂರು, ಸೆ. 3: ಸುಮಾರು 60 ಲಕ್ಷ ಉದ್ಯೋಗ ಸೃಷ್ಟಿ, ಮೂರು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯಲ್ಲಿ ಶೇ.30ರಷ್ಟು ಕರ್ನಾಟಕ ರಾಜ್ಯದಿಂದಲೇ ಕೊಡುಗೆ ನೀಡಲು ಉದ್ದೇಶಿಸಿರುವ ಅತ್ಯಂತ ಮಹತ್ವದ 'ಕರ್ನಾಟಕ ಮಾಹಿತಿ ತಂತ್ರಜ್ಞಾನ(ಐಟಿ) ಕಾರ್ಯನೀತಿ-2020-25'ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ನೂತನ ಐಟಿ ನೀತಿ ಜೊತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಗಳ ಉತ್ಪಾದನಾ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹಿಸಲು ವಿಶೇಷ ರಿಯಾಯಿತಿಗಳು, ಪ್ರೋತ್ಸಾಹ ನೀಡುವ ಯೋಜನೆಗೆ ಸಂಪುಟ ಸಮ್ಮತಿಸಿದೆ ಎಂದರು.
ಡಿಜಿಟಲ್ ಆರ್ಥಿಕತೆಗೆ ಸೈಬರ್ ಭದ್ರತೆ ಕಲ್ಪಿಸುವ ಮಾಹಿತಿ ತಂತ್ರಜ್ಞಾನ ನೀತಿಯನ್ನು ಒಳಗೊಂಡಿದ್ದು, ಮೇಲ್ಕಂಡ ನೂತನ ಐಟಿ ನೀತಿಯಡಿ ಬಂಡವಾಳ ಹೂಡಿಕೆಗೆ ಭೂಮಿ ಖರೀದಿ ಶೇ.25 ಮತ್ತು ಘಟಕ ಹಾಗೂ ಯಂತ್ರೋಪಕರಣಗಳ ಖರೀದಿಗೆ ಶೇ.20ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಶೇ 100ರಷ್ಟು ಹಿಂದಿರುಗಿಸಲಾಗುವುದು. ಭೂ ಪರಿವರ್ತನೆ ಶುಲ್ಕ ಶೇ.100 ರಷ್ಟು ಹಿಂದಿರಿಗಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ದರದಲ್ಲಿ ಪ್ರತಿ ಯುನಿಟ್ ಮೇಲೆ ರಿಯಾಯಿತಿ, ಉದ್ಯಮ ತಯಾರಿಕೆ ಆರಂಭಿಸಿದ ದಿನದಿಂದ 5 ವರ್ಷಗಳ ವರೆಗೆ ಈ ಪ್ರಯೋಜನ ನೀಡಲಾಗುವುದು. ವಿದ್ಯುತ್ ಸುಂಕತ್ಪಾದನೆ ಆರಂಭಿಸಿದ ದಿನದಿಂದ 5 ವರ್ಷಗಳ ವರೆಗೆ ಶೇ.100ರಷ್ಟು ವಿದ್ಯುತ್ ಸುಂಕ ವಿನಾಯ್ತಿ ನೀಡುವುದು ಸೇರಿದಂತೆ ಹೂಡಿಕೆದಾರರ ಪ್ರೋತ್ಸಾಹಕ್ಕೆ ಕ್ರಮ ವಹಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಹೊರ ಜಿಲ್ಲೆಗಳಿಗೆ ಆದ್ಯತೆ: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭೂಮಿ ಖರೀದಿಗೆ ಶೇ.25ರ ಪ್ರೋತ್ಸಾಹ ಧನ ಅನ್ವಯವಾಗುವುದಿಲ್ಲ. ಇತರ ಜಿಲ್ಲೆಗಳ ಎರಡು ಮತ್ತು ಮೂರನೆ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುವುದು. ಉಳಿದ ಜಿಲ್ಲೆಗಳಲ್ಲಿ 50 ಎಕರೆಗಳ ವರೆಗೆ ಭೂಮಿ ಖರೀದಿ ಮಾಡಿ ಕೈಗಾರಿಕೆ ಸ್ಥಾಪಿಸುವವರಿಗೆ ಈ ಪ್ರೋತ್ಸಾಹ ಧನ ದೊರೆಯಲಿದೆ ಎಂದು ಮಾಧುಸ್ವಾಮಿ ವಿವರ ನೀಡಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಅಥವಾ ಕೆಎಸ್ಎಸ್ಐಡಿಸಿಯಿಂದ ಭೂಮಿ ಖರೀದಿಸಿದರೆ ಭೂಮಿಯ ಮಾರ್ಗಸೂಚಿ ದರ ಅಥವಾ ಭೂಮಿಯ ಖರೀದಿ ದರದ ಶೇ.25ರಷ್ಟು ರಿಯಾಯ್ತಿ ಸಿಗಲಿದೆ ಎಂದ ಸಚಿವ ಜೆ.ಸಿ. ಮಾಧುಸ್ವಾಮಿ, ಉತ್ಪನ್ನಗಳ ವಹಿವಾಟಿನ ಮೇಲೆಯೂ ಶೇ.1ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಇದೇ ಸಂದರ್ಭದಲ್ಲಿ ವಿವರ ನೀಡಿದರು.







