ಸೆ. 4ರಿಂದ ಕಾರವಾರ-ಬೆಂಗಳೂರು ರೈಲು ಪುನರಾರಂಭ

ಫೈಲ್ ಫೋಟೊ
ಉಡುಪಿ : ಕೊರೋನ ಕಾರಣದಿಂದ ಮಾರ್ಚ್ನಿಂದಲೇ ಮಂಗಳೂರು ಬೆಂಗಳೂರು, ಕಾರವಾರ ಬೆಂಗಳೂರು ಮಧ್ಯೆ ಸಂಚಾರ ನಿಲ್ಲಿಸಿದ್ದ ರೈಲುಗಳು ಮತ್ತೆ ಓಡಲಿವೆ. ಈ ರೈಲುಗಳನ್ನು ಕೊರೋನ ಮಧ್ಯೆ ಈಗ ಪರೀಕ್ಷಾ ವಿಶೇಷ ರೈಲು ಹೆಸರಿನಲ್ಲಿ ಓಡಿಸಲು ರೈಲ್ವೇ ಮುಂದಾಗಿದೆ. ಸೆ.4ರಿಂದಲೇ ಈ ರೈಲುಗಳು ಸಂಚರಿಸಲಿವೆ.
ಸೆ.4ರಿಂದ ಶುರುವಾಗಿ ಮುಂದಿನ ಸೂಚನೆ ವರೆಗೂ ನಂ.06585 ಯಶವಂತ ಪುರ - ಕಾರವಾರ ಹಾಗೂ ನಂ.06586 ಕಾರವಾರ-ಯಶವಂತ ಪುರ ರೈಲು ಸೆ.5ರಿಂದ ಕಾರ್ಯಾರಂಭಿಸಲಿದೆ. ಹಿಂದೆ ಸಂಚರಿಸುತ್ತಿದ್ದ ನಂ.16595/16596 ರೈಲುಗಳದ್ದೇ ವೇಳಾಪಟ್ಟಿ ಇವುಗಳಿಗೂ ಅನ್ವಯವಾಗಲಿದೆ. ಸೆ.4ರಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲಪುವುದು. ಸೆ.5ರಂದು ಸಂಜೆ 6ಕ್ಕೆ ಕಾರವಾರದಿಂದ ರೈಲು ಹೊರಡಲಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ.
ಈ ರೈಲುಗಳಲ್ಲಿ 7 ಸ್ಲೀಪರ್, ಒಂದು 3ಟೈರ್ ಎಸಿ, ಒಂದು 2 ಟೈರ್ ಎಸಿ 4 ಸಾಮಾನ್ಯ ಸಹಿತ 15 ಬೋಗಿಗಳು ಇರಲಿವೆ. ರೈಲುಗಳಿಗೆ ಸ್ಟೇಷನ್ನಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಪೂರ್ವ ಕಾಯ್ದಿರಿಸಿದ ಟಿಕೆಟ್ನಲ್ಲೇ ಪ್ರಯಾಣಿಸಬೇಕಾಗುತ್ತದೆ.
ಬೆಂಗಳೂರು-ಮಂಗಳೂರು ರೈಲು
ನಂ.06515 ಬೆಂಗಳೂರು ಸಿಟಿ ಮಂಗಳೂರು (ವಾರದಲ್ಲಿ ನಾಲ್ಕುದಿನ) ರೈಲು ಸೆ.4ರಿಂದ ಮುಂದಿನ ಸೂಚನೆ ವರೆಗೆ ಹಾಗೂ ನಂ.06516 ಮಂಗಳೂರು-ಬೆಂಗಳೂರು ಸಿಟಿ(ವಾರದಲ್ಲಿ ನಾಲ್ಕು ದಿನ) ರೈಲು ಸೆ.6ರಿಂದ ಮುಂದಿನ ಸೂಚನೆ ವರೆಗೂ ಸಂಚರಿಸಲಿದೆ. ಇವುಗಳಿಗೆ ನಂ.16511/16512 ರೈಲುಗಳ ನಿಲುಗಡೆ ಅನ್ವಯವಾಗಲಿದೆ.
ನಂ.06517 ಬೆಂಗಳೂರು-ಮಂಗಳೂರು(ವಾರದಲ್ಲಿ ಮೂರುದಿನ) ರೈಲು ಸೆ.6ರಿಂದ ಹಾಗೂ ನಂ.06518 ಮಂಗಳೂರು-ಬೆಂಗಳೂರು (ವಾರದಲ್ಲಿ ಮೂರುದಿನ) ಸೆ.5ರಿಂದ ಸಂಚಾರ ಆರಂಭಿಸಲಿದೆ. ಈ ರೈಲುಗಳಿಗೆ ನಂ.16517/16518ರ ನಿಲುಗಡೆಯೇ ಅನ್ವಯವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.







