ಮಂಗಳೂರು ಐಟಿ ಕಚೇರಿಯ ವಿಭಾಗ ಗೋವಾ ಕಚೇರಿಯೊಂದಿಗೆ ವಿಲೀನಕ್ಕೆ ಸರಕಾರ ಸಿದ್ಧತೆ
ಕರಾವಳಿಯ ತೆರಿಗೆದಾರರಿಗೆ ಅನ್ಯಾಯ
ಮಂಗಳೂರು, ಸೆ. 4: ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ಆದಾಯ ತೆರಿಗೆಯ ಪ್ರಧಾನ ಆಯುಕ್ತ (ಪಿಸಿಐಟಿ)ರ ಕಚೇರಿಯನ್ನು ಗೋವಾದ ಕಚೇರಿಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರಕಾರ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ಇದು ವಿಶೇಷ ಆರ್ಥಿಕ ವಲಯ ಸಹಿತ ಸಾವಿರಾರು ಉನ್ನತ ಉದ್ಯಮಗಳನ್ನು ಹೊಂದಿರುವ ಕರಾವಳಿಯ ತೆರಿಗೆದಾರರಿಗೆ ಕೇಂದ್ರ ಸರಕಾರ ಮಾಡುತ್ತಿರುವ ಮತ್ತೊಂದು ಅನ್ಯಾಯ ಎಂಬ ಮಾತು ಕೇಳಿ ಬರುತ್ತಿದೆ.
ಕೇಂದ್ರ ಸರಕಾರದ ಸೂಚನೆಯಂತೆ ಮಂಗಳೂರಿನ ಕಚೇರಿಯು ಗೋವಾ ಕಚೇರಿಯೊಂದಿಗೆ ವಿಲೀನಗೊಳ್ಳಲಿದೆ. ಒಂದು ವೇಳೆ ಕೇಂದ್ರ ಸರಕಾರ ಸದ್ದಿಲ್ಲದೆ ವಿಲೀನಗೊಳಿಸಿದರೆ ಕರಾವಳಿಯ ತೆರಿಗೆದಾರರು ಗೋವಾಕ್ಕೆ ಅಲೆಯಬೇಕಾಗಿದೆ. ಪ್ರಸ್ತುತ ಕರಾವಳಿಯ ತೆರಿಗೆದಾರರು ಆಕ್ಷೇಪಿತ ತೆರಿಗೆ ಪರಿಷ್ಕರಣೆ ಮತ್ತು ಇತರ ತೆರಿಗೆ ಸಂಬಂಧಿ ಕೆಲಸಗಳಿಗಾಗಿ ಮಂಗಳೂರಿನ ಕಚೇರಿಯನ್ನು ಆಶ್ರಯಿಸಿದ್ದಾರೆ.
ಕರಾವಳಿಯ ಈ ಮೂರು ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ವ್ಯಾಪಾರ ಕೇಂದ್ರಗಳು, ಕೈಗಾರಿಕೆಗಳಿವೆ. ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಕರಾವಳಿಯ ಜಿಲ್ಲೆಗಳು ಪ್ರಮುಖವಾಗಿ ಗುರುತಿಸಿಕೊಂಡಿವೆ. ಬೆಂಗಳೂರಿನ ಬಳಿಕ ಉದ್ಯಮ ಸ್ಥಾಪನೆಗೆ ಉತ್ತಮ ವಾತಾವರಣವೂ ಈ ಜಿಲ್ಲೆಗಳು ಹೊಂದಿವೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 4 ಲಕ್ಷ ಮಂದಿ ತೆರಿಗೆದಾರರು ವಾರ್ಷಿಕ 3,300 ಕೋ.ರೂ. ತೆರಿಗೆ ಪಾವತಿಸುತ್ತಿದ್ದಾರೆ. ರಾಜ್ಯದಲ್ಲಿ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನ ಬೆಂಗಳೂರಿಗೆ, ದ್ವಿತೀಯ ಸ್ಥಾನ ಮಂಗಳೂರು ಮತ್ತು ತೃತೀಯ ಸ್ಥಾನವು ಹುಬ್ಬಳ್ಳಿಗಿದೆ.
ಕರಾವಳಿಗೆ ಅನ್ಯಾಯ
ಈಗಾಗಲೇ ಪ್ರಮುಖ ಬ್ಯಾಂಕ್ಗಳನ್ನು ವಿಲೀನಗೊಳಿಸಿರುವ ಕೇಂದ್ರ ಸರಕಾರವು ಮಂಗಳೂರು ರೈಲ್ವೆ ವಲಯ ಸಹಿತ ಹಲವು ಬೇಡಿಕೆಗಳನ್ನು ನಿರ್ಲಕ್ಷಿಸಿದೆ. ಈ ಮಧ್ಯೆ ಮಂಗಳೂರಿನ ಮಹತ್ವದ ಕಚೇರಿಯನ್ನು ಗೋವಾದ ಕಚೇರಿಯೊಂದಿಗೆ ವಿಲೀನಗೊಳಿಸಲು ಸಿದ್ಧತೆ ನಡೆಸುವ ಮೂಲಕ ಕರಾವಳಿಗರಿಗೆ ಅನ್ಯಾಯ ಎಸಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಸ್ತುತ ರಾಜ್ಯದಲ್ಲಿ ಕೇವಲ ಮೂರು (ಬೆಂಗಳೂರು, ಹುಬ್ಬಳ್ಳಿ, ಮಂಗಳೂರು) ಪಿಸಿಐಟಿ ಕಚೇರಿಗಳಿವೆ. ಈ ಸಂಖ್ಯೆಯೂ ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ. ವಾಸ್ತವ ಹೀಗಿರುವಾಗ ಇರುವ ಒಂದು ಪ್ರಮುಖ ಕಚೇರಿಯನ್ನೂ ಬೇರೆ ರಾಜ್ಯದ ಕೇಂದ್ರದೊಂದಿಗೆ ವಿಲೀನಗೊಳಿಸು ವುದು ಸರಿಯಲ್ಲ. ಇದರ ವಿರುದ್ಧ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಮತ್ತು ಕಚೇರಿಯನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ರಿರ್ಟರ್ನ್ಸ್ ಫೈಲ್ ನೋಟಿಸ್ ಹೆಚ್ಚಳ
ತೆರಿಗೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಆನ್ಲೈನ್ನಲ್ಲಿ ಲಭ್ಯವಾಗುತ್ತಿರುವುದರಿಂದ ವಾರ್ಷಿಕ ರಿಟರ್ನ್ಸ್ ಫೈಲ್ ಮಾಡದವರಿಗೆ ನೋಟಿಸ್ ಹೆಚ್ಚುತ್ತಿದೆ. ಹಲವರು ಮಾಹಿತಿಯ ಕೊರತೆಯಿಂದ ರಿಟರ್ನ್ಸ್ ಫೈಲ್ ಮಾಡುತ್ತಿಲ್ಲ. ಇಂತಹ ಸಂದರ್ಭ ಪಿಸಿಐಟಿ ಕಚೇರಿ ಮಂಗಳೂರಿನಲ್ಲಿಯೇ ಇದ್ದರೆ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವಾಗುತ್ತದೆ ಎಂಬುದು ಲೆಕ್ಕ ಪರಿಶೋಧಕರ ಅಭಿಪ್ರಾಯಪಡುತ್ತಾರೆ.
ಪ್ರಧಾನ ಆಯುಕ್ತರ ಕಚೇರಿ ಯಾಕೆ ?
ಪ್ರಮುಖ ತೆರಿಗೆಗಳು, ಕುಂದುಕೊರತೆ ಮತ್ತು ಅರ್ಜಿ ವಿಲೇವಾರಿಗಳಾದ 119, 220, 263, 264, ಬಡ್ಡಿ ಮನ್ನಾ, ಟಿಡಿಎಸ್ ವಿನಾಯಿತಿ ಪ್ರಮಾಣ ಪತ್ರಗಳಲ್ಲಿ ಪಿಸಿಐಟಿ ಕಚೇರಿ ಮುಖ್ಯ ಪಾತ್ರ ವಹಿಸುತ್ತದೆ. ಕರಾವಳಿಯಲ್ಲಿ ಸಹಕಾರಿ ಮತ್ತು ಶೆಡ್ನೂಲ್ಡ್ ಬ್ಯಾಂಕ್ಗಳು ಹೆಚ್ಚಿದ್ದು, ಮೌಲ್ಯ ಮಾಪನದಲ್ಲಿ ತೆರಿಗೆ ಆಕ್ಷೇಪ ಬಂದಾಗ ಪಿಸಿಐಟಿ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಬೃಹತ್ ಕೈಗಾರಿಕೆಗಳು, ಉನ್ನತ ಸಂಸ್ಥೆಗಳ ಕಚೇರಿ ಗಳು ಇಲ್ಲಿದ್ದು, ದೂರದ ಗೋವಾಕ್ಕೆ ಹೋಗುವುದು ಕಷ್ಟಸಾಧ್ಯ. ಅಲ್ಲದೆ ಈ ಐಟಿ ಸಮಸ್ಯೆಗಳು ಒಂದೇ ಬಾರಿಗೆ ಪರಿಹಾರವಾಗದೆ ಆಗಾಗ್ಗೆ ಹೋಗ ಬೇಕಾಗುವುದರಿಂದ ಸ್ಥಳೀಯ ತೆರಿಗೆದಾರರ ಸಮಯ ಮತ್ತು ಹಣ ಎರಡೂ ವ್ಯರ್ಥವಾಗಲಿವೆ.
ಉಸ್ತುವಾರಿ ಸಚಿವರಿಂದ ಪತ್ರ
ಮಂಗಳೂರಿನ ಪಿಸಿಐಟಿ ಕಚೇರಿಯನ್ನು ಗೋವಾದ ಕಚೇರಿಯೊಂದಿಗೆ ವಿಲೀನಗೊಳಿಸದಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.