ಕೇರಳ ಮಾದರಿಯ ಸಾಗರ ಅಂಬುಲೆನ್ಸ್ ಆರಂಭಿಸಲು ಆಗ್ರಹ
ಉಡುಪಿ, ಸೆ.4: ಕಡಲಾಳದಲ್ಲಿ ಮೀನುಗಾರಿಕೆ ನಡೆಸುವಾಗ ಅಫಘಾತಗಳು ಹಾಗೂ ಮೀನುಗಾರರ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ತುರ್ತು ಚಿಕಿತ್ಸೆ ನೀಡಲು ತುರ್ತು ಸಾಗರ ಅಂಬುಲೆನ್ಸ್ ಆರಂಭಿಸುವಂತೆ ಮಲ್ಪೆ ಆಳಸಮುದ್ರ ಟ್ರಾಲ್ಬೋಟ್ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುರ್ವಣ ಮಲ್ಪೆ ಆಗ್ರಹಿಸಿದ್ದಾರೆ.
ನೂರಾರು ಮೈಲು ಅಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಹಲವು ಅವಘಡಗಳು ಸಂಭವಿಸಿವೆ. ಈ ಸಂಧರ್ಭದಲ್ಲಿ ಉಳಿದ ಮೀನು ಗಾರಿಕಾ ಬೋಟಿನವರು ರಕ್ಷಣೆ ಮಾಡಿದರು ಸಹ, ಚಿಕಿತ್ಸೆಗಾಗಿ ದಡ ತಲುಪಿ ಸುವ ಹೊತ್ತಿಗೆ ಸಮಯ ಮೀರಿ ಹೋಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಾಗರ ಅಂಬ್ಯುಲೆನ್ಸ್ ಇದ್ದರೆ ಕ್ಲಪ್ತ ಸಮಯದಲ್ಲಿ ಮೀನುಗಾರರಿಗೆ ಚಿಕಿತ್ಸೆ ದೊರೆತು ಪ್ರಾಣ ಉಳಿಸಲು ಸಾಧ್ಯವಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಳೆದ ಐದು ವರ್ಷಗಳಿಂದ ರಾಜ್ಯ ಹಾಗೂ ಕೇಂದ್ರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೇರಳ ಸರಕಾರ ಈಗಾಗಲೇ ಸಾಗರ ಅಂಬ್ಯುಲೆನ್ಸ್ ಸೇವೆ ಜಾರಿಗೆ ತಂದಿದೆ. ಇದೇ ಮಾದರಿಯಲ್ಲಿ ಕರಾವಳಿಗೂ ಸಾಗರ ಅಂಬ್ಯುಲೆನ್ಸ್ ಮಂಜೂರು ಮಾಡಬೇಕು ಎಂದು ಬಿಜೆಪಿ ಮೀನುಗಾರ ಪ್ರಕೋಷ್ಟದ ಜಿಲ್ಲಾ ಸಂಚಾಲಕರೂ ಆಗಿರುವ ರವಿರಾಜ್ ಸುವರ್ಣ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪಅವರ್ನು ಆಗ್ರಹಿಸಿದ್ದಾರೆ.





