ಡ್ರಗ್ ಸರಬರಾಜು ಆರೋಪಿತರಿಂದ ಜಾಮೀನು ಅರ್ಜಿ: ವಿಚಾರಣೆ ಸೆ.7ಕ್ಕೆ ಮುಂದೂಡಿಕೆ
ಬೆಂಗಳೂರು, ಸೆ.4: ಮಾದಕ ವಸ್ತು ಸರಬರಾಜು ಮಾಡಿದ ಆರೋಪದಡಿ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳು ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಸೆ.7ಕ್ಕೆ ಮುಂದೂಡಿದೆ.
ಡ್ರಗ್ ಸರಬರಾಜು ಮಾಡಿದ ಆರೋಪದಡಿ ಮಾದಕವಸ್ತು ನಿಯಂತ್ರಣ ದಳದ(ಎನ್.ಸಿ.ಬಿ) ಅಧಿಕಾರಿಗಳು ಬಂಧಿಸಿರುವ ಮುಹಮ್ಮದ್ ಅನೂಪ್ ಹಾಗೂ ರಿಜೇಶ್ ರವಿಟಿದ್ರನ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನಗರದ 33ನೆ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತು.
ಈ ವೇಳೆ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ವಿವರಣೆ ನೀಡಿ, ಈ ಪ್ರಕರಣ ದೇಶದಾದ್ಯಂತ ಸಂಚಲನ ಮೂಸಡಿಸಿದೆ. ಸಂಗೀತ ಕಾರ್ಯಕ್ರಮಗಳು ಹಾಗೂ ರೇವ್ ಪಾರ್ಟಿಗಳಿಗೆ ಡ್ರಗ್ ಪೂರೈಸಿದ ಆರೋಪ ಇವರ ಮೇಲಿದೆ. ಹೀಗಾಗಿ ಮಾಹಿತಿ ಸಂಗ್ರಹಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಸರಕಾರದ ಪರ ವಕೀಲರ ಕೋರಿಕೆ ಪರಿಗಣಿಸಿದ ಕೋರ್ಟ್ ಆರೋಪಿತರ ಜಾಮೀನು ಕೋರಿಕೆ ಅರ್ಜಿಗಳನ್ನು ಸೆ.7ಕ್ಕೆ ಮುಂದೂಡಿತು. ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.





