ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಸೂಕ್ತ ಪರಿಹಾರ ವಿಚಾರ: ಸಿಎಂಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಪತ್ರ
ಬೆಂಗಳೂರು, ಸೆ.4: ಇತ್ತೀಚೆಗೆ ಜಲಪ್ರಳಯದಿಂದ ನಲುಗಿರುವ ಕೊಡಗು ಜಿಲ್ಲೆಗೆ ಅತಿವೃಷ್ಟಿಯಿಂದ ಶಾಶ್ವತ ಪರಿಹಾರ, ಬೆಳೆ ಹಾನಿ ಮತ್ತು ಮೂಲಸೌಕರ್ಯದ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.
ಈ ಬಗ್ಗೆ ವಿವರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸೋಮಣ್ಣ, ಜಿಲ್ಲೆಯಲ್ಲಿ 91 ಗ್ರಾಮಗಳು ಮಳೆಯಿಂದ ಉಂಟಾದ ಪ್ರವಾಹಕ್ಕೆ ತುತ್ತಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಸುಮಾರು 41,026 ಹೆಕ್ಟೇರ್ ಬೆಳೆಹಾನಿ, ಅಂದಾಜು 415 ಕೋಟಿ ರೂ.ಗಳ ಮೂಲಸೌಕರ್ಯ ಹಾನಿಯಾಗಿದ್ದು, ಹಾನಿಗೀಡಾದ ರಸ್ತೆ, ಸೇತುವೆ, ಇತ್ಯಾದಿ ಮೂಲ ಸೌಕರ್ಯಗಳ ದುರಸ್ಥಿ ಹಾಗೂ ಪುನರ್ನಿರ್ಮಾಣ ಸಮರೋಪಾದಿಯಲ್ಲಿ ಮಾಡಬೇಕು ಎಂದು ಕೋರಿದ್ದಾರೆ.
ಜೊತೆಗೆ ರೈತರ ಜಮೀನಿನಲ್ಲಿ ಸಂಗ್ರಹವಾದ ಮರಳನ್ನು ರಾಯಲ್ಟಿ ಇಲ್ಲದೇ ಮಾರಾಟ ಮಾಡಲು ಭೂಮಾಲಕ ರೈತರಿಗೆ ಅವಕಾಶ ನೀಡಬೇಕು ಹಾಗೂ ಕಾಫಿ ಬೆಳೆಗಾರರ ತೋಟದಲ್ಲಿ ಬಿದ್ದಿರುವ ಬೆಲೆ ಬಾಳುವ ಮರಗಳನ್ನು ಹೊರತುಪಡಿಸಿ ಇತರೇ ಮರಗಳನ್ನು ಮಾರಾಟ ಮಾಡಲು ಅದೇ ರೈತರಿಗೆ ಅವಕಾಶ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ಹಿಂದಿನ ಸಾಲಿನಲ್ಲಿ ಘೋಷಣೆಯಾದ ಪ್ರವಾಹ ಪ್ಯಾಕೇಜ್ 536 ಕೋಟಿ ರೂ.ಗಳ ಪೈಕಿ ಬಿಡುಗಡೆಗೆ ಬಾಕಿ ಇರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಪತ್ರದಲ್ಲಿ ವಿವರಿಸಿದ್ದಾರೆ. ಮುಂದುವರಿದು, ಜಿಲ್ಲೆಯು ಪದೇ ಪದೇ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಮೂರು ತಾಲೂಕುಗಳನ್ನು ಅತಿವೃಷ್ಠಿಪೀಡಿತವೆಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಚಿವ ಸೋಮಣ್ಣ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ, ಈ ಬಗ್ಗೆ ಕೂಡಲೆ ಸೂಕ್ತ ಆದೇಶವನ್ನು ಸರಕಾರದಿಂದ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.